ಡೈಲಿ ವಾರ್ತೆ: 10/ಆಗಸ್ಟ್/2024

ಮರು ಮೌಲ್ಯಮಾಪನ ಶುಲ್ಕ ಮರಳಿಸದಿರಲು ತೀರ್ಮಾನ ಕೈಗೊಂಡ VTU ನಿರ್ಧಾರ ಅತ್ಯಂತ ಖಂಡನೀಯ – ಅನ್ವಿತ್ ಕಟೀಲ್

ವಿದ್ಯಾರ್ಥಿಗಳು ತಾವು ಅಂಕ ಗಳಿಸಿದ್ದರಲ್ಲಿ ಯಾವುದಾದರೂ ಸಮಸ್ಯೆಯಿದ್ದರೆ ಅಥವಾ ತಾವು ಗಳಿಸಿದ ಅಂಕದ ಕುರಿತು ಸಮಾಧಾನ ಅವರಿಗಿಲ್ಲದ್ದಿದ್ದರೆ ಅದರ ಮೇಲೆ ಮರು ಮೌಲ್ಯ ಮಾಪನ ಮಾಡಿಸುವುದು ಎಲ್ಲಾ ವಿದ್ಯಾರ್ಥಿಗಳ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯಾವ ಪಾಪ ಮಾಡಿದ್ದಾರೋ ತಿಳಿಯದು ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನ್ವಿತ್ ಕಟೀಲ್ ಅವರು ಹೇಳಿದ್ದಾರೆ.

ಈಗಾಗಲೇ ವಿದ್ಯಾರ್ಥಿಗಳಿಗೆ ಮರು ಮೌಲ್ಯ ಮಾಪನಕ್ಕೆ ಶುಲ್ಕ ಹೆಚ್ಚಳಗೊಳಿಸಿ ಹೊರೆ ವಿಧಿಸಿರುವ ವಿಶ್ವವಿದ್ಯಾಲಯ. ಈಗ ಶುಲ್ಕವನ್ನು ಹಿಂದಿರುಗಿಸದೆ ಇರುವ ನಿರ್ಧಾರ ಮಾಡಿರುವುದು ವಿದ್ಯಾರ್ಥಿ ಹಿತಕ್ಕೆ ಅತ್ಯಂತ ಮಾರಕವಾಗಿದೆ. ಈ ಮುಂಚೆ ವಿದ್ಯಾರ್ಥಿಗಳಿಗೆ 15 ಅಥವಾ ಅದಕ್ಕಿಂತ ಹೆಚ್ಚಿನ ಅಂಕವನ್ನು ಮರುಮೌಲ್ಯಮಾಪನದಲ್ಲಿ ಪಡೆದುಕೊಂಡರೆ ಅವರ ಶುಲ್ಕವನ್ನು ಹಿಂದಿರುಗಿಸಲಾಗುತ್ತಿತ್ತು. ಆದರೆ, ಈಗ ಏಕಾಏಕೀ ನಿರ್ಧಾರವನ್ನು ವಿದ್ಯಾರ್ಥಿಗಳೊಂದಿಗೆ ಯಾವುದೇ ಚರ್ಚೆಯನ್ನು ಮಾಡದೇ ಕೈಗೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳ ಪರವಾಗಿ ಈ ನಿರ್ಧಾರವನ್ನು ನಾನು NSUI ನ ಪರವಾಗಿ ಖಂಡಿಸುತ್ತೇನೆ ಹಾಗೂ ತಕ್ಷಣವೇ ಇದನ್ನು ಹಿಂಪಡೆಯಬೇಕು ಎಂದು ಕೋರಿಕೊಳ್ಳುತೇನೆ ಎಂದು ಅವರು ವಿಶ್ವವಿದ್ಯಾಲಯವನ್ನು ಅಗ್ರಹಿಸಿದ್ದಾರೆ…