ಡೈಲಿ ವಾರ್ತೆ: 12/ಆಗಸ್ಟ್/2024

ಉಳ್ಳಾಲ: ನಟೋರಿಯಸ್ ರೌಡಿ ಕಡಪ್ಪರ ಸಮೀ‌ರ್ ಭೀಕರ ಹತ್ಯೆ – ತಾಯಿಯ ಎದುರಲ್ಲೇ ಅಟ್ಟಾಡಿಸಿದ ದುಷ್ಕರ್ಮಿಗಳು!

ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಕಡಪ್ಪರ ಸಮೀ‌ರ್ ಮೇಲೆ ಭೀಕರ ತಲ್ವಾರ್ ದಾಳಿಯಿಂದ ಹತ್ಯೆ ಮಾಡಲಾಗಿದೆ.

ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ತನ್ನ ತಾಯಿ ಜೊತೆ ಊಟಕ್ಕೆಂದು ರೆಸ್ಟೋರೆಂಟ್‌ ಗೆ ತೆರಳುತ್ತಿದ್ದಾಗ ರೌಡಿ ಶೀಟ‌ರ್ ಸಮೀರ್ ಮೇಲೆ ತಲ್ವಾ‌ರ್ ದಾಳಿಯಾದ ಘಟನೆ ಕಲ್ಲಾಪುವಿನಲ್ಲಿ ನಡೆದಿದೆ.

ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಕಡಪ್ಪರ ಸಮೀರ್ ರವರನ್ನು ದುಷ್ಕರ್ಮಿಗಳು ತನ್ನ ತಾಯಿಯ ಕಣ್ಣಿನೆದುರಲ್ಲೇ ಅಟ್ಟಾಡಿಸಿ ದಾಳಿ ಮಾಡಿದ್ದಾರೆ. ಸಮೀರ್ ಕಾರಿನಿಂದ ಇಳಿಯುತ್ತಿದ್ದಾಗಲೇ ಮತ್ತೊಂದು ಕಾರಿನಲ್ಲಿ ಬೆನ್ನಟ್ಟಿ ಬಂದಿದ್ದ ಐದಾರು ಮಂದಿಯಿದ್ದ ತಂಡವು ಸಮೀರ್ ನನ್ನು ಬೆನ್ನಿಟ್ಟಿದ್ದು ಸ್ವಲ್ಪ ದೂರದಲ್ಲಿ ಮೃತದೇಹ ಸಿಕ್ಕಿದೆ.

ದರೋಡೆ ಪ್ರಕರಣದಲ್ಲಿ ಒಂದು ತಿಂಗಳ ಹಿಂದೆ ಜೈಲು ಸೇರಿಕೊಂಡಿದ್ದ ಸಮೀರ್ ಮತ್ತು ತಂಡ ಕಳೆದ ಎರಡು ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದು ಇದೀಗ ತಲ್ವಾರ್ ದಾಳಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.