ಡೈಲಿ ವಾರ್ತೆ: 16/ಆಗಸ್ಟ್/2024

ಯಡಾಡಿ-ಮತ್ಯಾಡಿ ಲಿಟ್ಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಮಹನೀಯರನ್ನು ಮೂರು ಘೋಷಣೆಯೊಂದಿಗೆ ಸ್ಮರಿಸಬೇಕು – ಏರ್ ಮಾರ್ಷಲ್ ರಮೇಶ್ ಕಾರ್ಣಿಕ್

ಕುಂದಾಪುರ: ಬ್ರಿಟಿಷರ ಕರಾಳ ದಾಸ್ಯದಿಂದ ಮುಕ್ತರಾಗಿ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ ಇಂದು ನಾವೆಲ್ಲರೂ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ.
ಆದರೆ ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಆದೆಷ್ಟೋ ಜನ ಹಿರಿಯರು ಇದ್ದಾರೆ, ಕಷ್ಟ ನಷ್ಟ ಗಳನ್ನು ಅನುಭವಿಸಿದವರಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ವಂದೇ ಮಾತರಂ’ ‘ಜೈಹಿಂದ್’ ‘ಭಾರತ್ ಮಾತಾ ಕಿ ಜೈ’ ಎಂಬ ಮೂರು ಘೋಷಣೆಯನ್ನು ಹೇಳುವುದರ ಮೂಲಕ ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಹೋರಾಟಗಾರರನ್ನು ಸ್ಮರಿಸಿಕೊಂಡು ಗೌರವಿಸಿ, ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ರವರು
ವಿದ್ಯಾರ್ಥಿಗಳಿಗೆ ತಿಳಿಹೇಳಿದರು.


ಅವರು ಆ. 15 ರಂದು ಸುಜ್ಞಾನ್‌ ಎಜುಕೇಷನಲ್‌ ಟ್ರಸ್ಟ್ ವಿದ್ಯಾರಣ್ಯ ( ಲಿಟ್ಲ್ ಸ್ಟಾರ್) ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿ ಸ್ವಾತಂತ್ರ್ಯದ ನಂತರ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಶಿಕ್ಷಣ ಇನ್ನುಳಿದ ಕ್ಷೇತ್ರಗಳಲ್ಲಿ ಭಾರತ ಜಗತ್ತಿಗೆ ಸ್ಪರ್ಧಿಸಿ ಉಳಿದ ದೇಶಗಳಿಗೆ ಮಾದರಿಯಾಗಿದೆ. ಬಡವರ ಏಳಿಗೆ ಮತ್ತು ಇನ್ನುಳಿದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಿ, ತ್ಯಾಗ ಮನೋಭಾವನೆ ಆದರ್ಶಕತೆ, ಪ್ರೀತಿ -ನಂಬಿಕೆ, ಪ್ರಾಮಾಣಿಕತೆ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯದ ಕನಸು ನನಸಾಗಲು ಸಾಧ್ಯ ಎಂದು ಏರ್ ಮಾರ್ಷಲ್ ಹೇಳಿದರು.

ಕಾರ್ಯಕ್ರಮವನ್ನು ಭವ್ಯ ಮೆರವಣಿಗೆಯ ಮುಖಾಂತರ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್.ಕೆ , ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ದಿವಾಕರ್ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿ ವಂದಿಸಿದರು. ನಂತರ ಮಂಗಳೂರು ತಂಡದವರಿಂದ ದೇಶಭಕ್ತಿ ಕಾರ್ಯಕ್ರಮ ನಡೆಯಿತು.