ಡೈಲಿ ವಾರ್ತೆ: 18/ಆಗಸ್ಟ್/2024

ಮಂಗಳೂರು: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿಯ ಖಾಸಗಿ ಬಸ್ ಚಾಲಕ–ನಿರ್ವಾಹಕ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಚಾಲಕ–ನಿರ್ವಾಹಕ

ಮಂಗಳೂರು: ಮತ್ತೊಮ್ಮೆ ಮಾನವೀಯತೆ ಮೆರೆದು ಕರಾವಳಿಯ ಖಾಸಗಿ ಬಸ್ ಚಾಲಕ–ನಿರ್ವಾಹಕರು ಸುದ್ದಿಯಲ್ಲಿದ್ದಾರೆ.

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಖಾಸಗಿ ಬಸ್ಸಿನಲ್ಲೇ ಚಾಲಕ–ನಿರ್ವಾಹಕರು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಘಟನೆ ಆ. 18 ರಂದು ಭಾನುವಾರ ಬೆಳಿಗ್ಗೆ ಪಣಂಬೂರು ಪೋರ್ಟ್ ಬಳಿ ನಡೆದಿದೆ.

ಪಣಂಬೂರು ಪೋರ್ಟ್ ಎದುರುಗಡೆ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದು ಯಾರು ಹತ್ತಿರ ಬಾರದ ಕ್ಷಣದಲ್ಲಿ ಆಪತ್ಬಾಂಧವರಾಗಿ ಅದೇ ದಾರಿಯಲ್ಲಿ ಕುಂದಾಪುರದಿಂದ ಮಂಗಳೂರು ಬರುತ್ತಿದ್ದ AKMS ಖಾಸಗಿ ಬಸ್ ಚಾಲಕ ಶರಣ್ ಹಾಗೂ ನಿರ್ವಾಹಕ ಮುನಾವರ್ ಕೋಡಿ ಅವರು ಬಸ್ ನಿಲ್ಲಿಸಿ. ಬಸ್ ಮಾಲಕ ಸೈಫುದ್ದಿನ್ ಅವರ ಅನುಮತಿ ಮೇರೆಗೆ ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ತಮ್ಮ ಬಸ್ಸಿನಲ್ಲೇ ಹಾಕಿ ಬಸ್ ಅನ್ನೇ ಎ.ಜೆ. ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ, ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರಗಿದ್ದಾರೆ.

ಬಸ್ ಚಾಲಕ ಶರಣ್, ನಿರ್ವಾಹಕ ಮುನಾವರ್ ಕೋಡಿ
ಇವರ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರಿಂದ
ಭಾರೀ ಪ್ರಶಂಸೆ ವ್ಯಕ್ತವಾಗಿದೆ‌.