ಡೈಲಿ ವಾರ್ತೆ: 21/ಆಗಸ್ಟ್/2024

ಪತ್ನಿ ಅನುಮಾನಾಸ್ಪದ ಸಾವು, ಗಂಡ ಆತ್ಮಹತ್ಯೆಗೆ ಶರಣು

ಮಂಡ್ಯ: ಪತ್ನಿಯ ಅನುಮಾನಾಸ್ಪದ ಸಾವಿಗೆ ಹೆದರಿದ ಪತಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗದ್ದೆ ಹೊಸೂರು ಗ್ರಾಮದ ಮೋಹನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನಿನ್ನೆ ಆ.20ರ ಮಂಗಳವಾರ ರಾತ್ರಿ ಮೋಹನ್ ಪತ್ನಿ ಸ್ವಾತಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ಘಟನೆ ಬಳಿಕ ಮನೆಯಿಂದ ಪತಿ ಮೋಹನ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದರು.
ಮೃತ ಯುವತಿಯ ಪೋಷಕರು ಗಂಡ ಹಾಗೂ ಆತನ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಆದರೆ ಬುಧವಾರ ಬೆಳಿಗ್ಗೆ ಕೆರೆಯಲ್ಲಿ ಪತಿ ಮೋಹನ್ ಶವ ಪತ್ತೆಯಾಗಿದೆ.

ಪತ್ನಿಯ ಸಾವಿಗೆ ಹೆದರಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಪತ್ನಿ ಸ್ವಾತಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೋಹನ್ ಪೋಷಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು.