ಡೈಲಿ ವಾರ್ತೆ: 24/ಆಗಸ್ಟ್/2024

ಕಾರ್ಕಳ:ಯುವತಿ ಅತ್ಯಾಚಾರ ಪ್ರಕರಣ – ಕಾರ್ಕಳಕ್ಕೆ ಪಶ್ಚಿಮ ವಲಯ ಐಜಿ ಅಮಿತ್‌ ಸಿಂಗ್ ಭೇಟಿ, ಪರಿಶೀಲನೆ

ಕಾರ್ಕಳ: ಹಿಂದೂ ಯುವತಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್ ಕಾರ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಕರಣ ಕುರಿತು ಪೊಲೀಸ್ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದೆ. ಯುವತಿಗೆ ಮದ್ಯದಲ್ಲಿ ಮಾದಕ ವಸ್ತು ಮಿಶ್ರಣ ಮಾಡಿ ನೀಡಿ ಅತ್ಯಾಚಾರ ಮಾಡಲಾಗಿದೆ. ಸದ್ಯ ಯುವತಿಯ ಆರೋಗ್ಯ ಸ್ಥಿತಿ ಉತ್ತಮವಾಗುತ್ತಿದೆ. ಯುವತಿಯಿಂದ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಾಗಿದೆ. ಆರೋಪಿ ಅಲ್ತಾಫ್ ಸಂತ್ರಸ್ತೆ ಜೊತೆ ಸುತ್ತಾಡಲು ಶಿವಮೊಗ್ಗ ನೋಂದಾವಣೆಯ ವೆರ್ಣ ಕಾರು ಬಳಸಿದ್ದು ಅದು ಈಗ ಪೊಲೀಸ್ ವಶದಲ್ಲಿ ಇದೆ. ಅಲ್ಲದೆ ಆರೋಪಿ ಕೂಡ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ.

ಗ್ಯಾಂಗ್ ರೇಪ್ ಬಗ್ಗೆ ಇದುವರೆಗೆ ಸಂತ್ರಸ್ತೆ ಯಾವುದೇ ಹೇಳಿಕೆ ನೀಡಿಲ್ಲ. ತನಿಖೆ ಪ್ರಗತಿಯಲ್ಲಿದ್ದು ಇನ್ನಷ್ಟು ವಿಚಾರಣೆಯ ಬಳಿಕ ಮಾಹಿತಿ ನೀಡಲಾಗುವುದು. ಆರೋಪಿಗೆ ಇಬ್ಬರು ಬಿಯರ್ ತಂದು ನೀಡಿದ್ದು ಅದಕ್ಕೆ ಮಾದಕ ವಸ್ತು ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಎಸಗಲಾಗಿದೆ. ಸದ್ಯ ಯುವತಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ರಕ್ತ ಪರೀಕ್ಷೆಯ ವರದಿಯೂ ಇನ್ನಷ್ಟೆ ಬರಬೇಕಿದೆ ಎಂದು ಹೇಳಿದ್ದಾರೆ.