ಡೈಲಿ ವಾರ್ತೆ: 26/ಆಗಸ್ಟ್/2024

ವಂಡ್ಸೆ: ಬಾರೀ ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಸಾವು

ಕುಂದಾಪುರ: ಬಾರೀ ಗಾಳಿ ಮಳೆಯಿಂದ ಮರ ಬಿದ್ದು ಓರ್ವ ಮಹಿಳೆ ಹಾಗೂ ಎರಡು ಹಸುಗಳು ಮೃತಪಟ್ಟ ಘಟನೆ ಭಾನುವಾರ ಸಂಜೆ ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದ ಮಲ್ಲಾರಿ ಬಳಿ ನಡೆದಿದೆ.

ಮೃತಪಟ್ಟ ದುರ್ದೈವಿ ಮಹಿಳೆ ಕೆಂಚನೂರು ಗ್ರಾಮದ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರ್ಯ ಅವರ ಪತ್ನಿ ಸುಜಾತಾ ಆಚಾರ್ಯ(53) ಎಂದು ಗುರುತಿಸಲಾಗಿದೆ.

ಸಂಜೆ 6 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದ ಸಂದರ್ಭ ಸುಜಾತಾ ಆಚಾರ್ತಿಯವರು ಮನೆಯ ಸಮೀಪ ಮೇಯಲು ಕಟ್ಟಿರುವ ದನವನ್ನು ಬಿಡಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬಾರಿ ಗಾಳಿಯಿಂದಾಗಿ ಮರವೊಂದು ಬುಡಸಹಿತ ಆಕೆಯ ಮೇಲೆ ಮತ್ತು ಎರಡು ಹಸುಗಳ ಮೇಲೆ ಬಿದ್ದಿದ್ದು ಮಹಿಳೆ ಮರದಡಿಯಲ್ಲಿ ಸಿಲುಕಿ ಕೊಂಡಿರುತ್ತಾರೆ.
ತಕ್ಷಣ ಸ್ಥಳೀಯರು ಸೇರಿ ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಮರದಡಿಯಲ್ಲಿ ಸಿಲುಕಿದ ದನವೂ ಸ್ಥಳದಲೇ ಮೃತಪಟ್ಟಿರುತ್ತದೆ ಎಂದು ತಿಳಿದು ಬಂದಿದೆ.

ಸುಜಾತಾ ಆಚಾರ್ತಿ ಅವರು ಪತಿ, ಹಾಗೂ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.