ಡೈಲಿ ವಾರ್ತೆ: 26/ಆಗಸ್ಟ್/2024

ದರ್ಶನ್​ ಫೋಟೋ ವೈರಲ್ ಬೆನ್ನಲ್ಲೇ ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳು ಸಸ್ಪೆಂಡ್ – ಗೃಹಸಚಿವ ಜಿ. ಪರಮೇಶ್ವರ್

ಬೆಂಗಳೂರು: ನಟ ದರ್ಶನ್ ಅವರು ಕೇಂದ್ರ ಕಾರಾಗೃಹದಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ಇದ್ದರು. ಈ ಫೋಟೋ ವೈರಲ್ ಆಗಿತ್ತು. ಇದರ ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿದ್ದಾರೆ. ಜೈಲಿನ ಏಳು ಅಧಿಕಾರಿಗಳನ್ನು ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣದಲ್ಲಿ ಏಳು ಅಧಿಕಾರಿಗಳನ್ನು ನಾವು ಸಸ್ಪೆಂಡ್ ಮಾಡಿದ್ದೇವೆ. ನಾನು ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು. ಕೆಲವರನ್ನು ಸಸ್ಪೆಂಡ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲಧಿಕಾರಿಗಳನ್ನು ಟ್ರಾನ್ಸ್​ಫಾರ್​​ ಮಾಡ್ತೇನೆ. ಪದೇ ಪದೇ ಈ ರೀತಿ ಆಗಬಾರದು. ಎಲ್ಲಾ ಬಂಧಿಕಾನೆಗಳಲ್ಲಿ ಸಿಸಿಟಿವ ಹಾಕುತ್ತಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆ’ ಎಂದು ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ.

ಮೇಲಧಿಕಾರಿಗಳು ಈ ಪ್ರಕರಣದಲ್ಲಿ ನೇರವಾಗಿ ಭಾಗಿ ಆಗಿದ್ದರೆ ಅವರನ್ನು ತೆಗೆದು ಹಾಕುತ್ತೇವೆ. ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ. ಊಟದ ವಿಚಾರ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ದರ್ಶನ್​ಗೆ ಚಿಕನ್ ಬಿರಿಯಾನಿ ಕೊಟ್ಟಿಲ್ಲ. ಜೈಲಿನ ನಿಯಮದಂತೆ ನಡೆಯಲಾಗುತ್ತಿದೆ. ಈಗ ನಡೆದ ಘಟನೆ ಸಮರ್ಥಿಸಿಕೊಳ್ಳುತ್ತಿಲ್ಲ’ ಎಂದಿದ್ದಾರೆ ಪರಮೇಶ್ವರ್.

ಜೈಲಿನಲ್ಲಿ ಜಾಮರ್ ಹಾಕಿ ಹೈ ಪ್ರೀಕ್ವೆನ್ಸಿ ಇಡಲಾಗಿತ್ತಂತೆ. ಇದರಿಂದ ಪಕ್ಕದ ಏರಿಯಾಗಳಿಗೆ ತೊಂದರೆ ಆಗಿತ್ತು. ಹೀಗಾಗಿ, ಸದ್ಯ ಪ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ. ‘ಫೋಟೋ ಯಾರು ತೆಗೆದರು? ಯಾರ ಮೊಬೈಲ್​ನಲ್ಲಿ ತೆಗದಿದ್ದಾರೆ ಅನ್ನೋದು ಮುಖ್ಯ ಆಗುತ್ತದೆ’ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಸ್ಪೆಂಡ್ ಆದವರು ಯಾರು?
ಜೈಲರ್​​​ಗಳಾದ ಶರಣಬಸವ ಅಮೀನ್​​ಗಢ, ಖಂಡೇವಾಲ್, ಸಹಾಯಕ ಜೈಲರ್​ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್​ ತಲವಾರ್​, ಜೈಲಿನ ಹೆಡ್​​ ವಾರ್ಡರ್​ಗಳಾದ ವೆಂಕಪ್ಪ, ಸಂಪತ್, ವಾರ್ಡರ್​​​ ಬಸಪ್ಪ ಅವರನ್ನು ಅಮಾನತುಗೊಂಡವರು.