ಡೈಲಿ ವಾರ್ತೆ: 27/ಆಗಸ್ಟ್/2024

ಕೋಟೇಶ್ವರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ: ಹಬ್ಬಗಳ ಆಚರಣೆಯ ಮೂಲಕ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಅರಿಯಬೇಕು – ಹತ್ವಾರ್

ಕುಂದಾಪುರ: ನಮ್ಮೆಲ್ಲ ಹಬ್ಬ – ಹರಿದಿನಗಳು ಉನ್ನತವಾದ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಒಳಗೊಂಡಿವೆ. ಹಬ್ಬಗಳ ಆಚರಣೆ ನಮ್ಮ ಧರ್ಮ, ಸಂಸ್ಕೃತಿಯನ್ನು ಅರಿತುಕೊಳ್ಳಲು ಸುಲಭ ಮಾರ್ಗ. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮೂಲಕ ನಾವು ಆತನ ಜೀವನ ಮೌಲ್ಯವನ್ನು ಅರಿತು ಅಳವಡಿಸಿಕೊಳ್ಳಬೇಕು. ಈ ಮೂಲಕ ಕಿರಿಯ ಜನಾಂಗದಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸಲು ದಾರಿಯಾಗಬೇಕು. ಎಂದು ಮಿತ್ರದಳ ಕೋಟೇಶ್ವರದ ಅಧ್ಯಕ್ಷ ಎಚ್. ಎಂ. ಗೋಪಾಲಕೃಷ್ಣ ಹತ್ವಾರ್ ಹೇಳಿದರು.

ಮಿತ್ರದಳ ಚಾರಿಟೇಬಲ್ ಟ್ರಸ್ಟ್ ಮತ್ತು ಮಿತ್ರದಳ ಕೋಟೇಶ್ವರ ಇವರ ನೇತೃತ್ವದಲ್ಲಿ ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ಜರಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನ್ಮಾಷ್ಟಮಿ ಆಚರಣೆಯಂಗವಾಗಿ ಪುಟಾಣಿಗಳು ಮತ್ತು ಹಿರಿಯರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶ್ರೀ ಕೋದಂಡ ರಾಮ ಮಂದಿರ ಸಮಿತಿಯ ಅಧ್ಯಕ್ಷ ಸತ್ಯಮೂರ್ತಿ ಎಂ. ಎಸ್., ಬ್ರಾಹ್ಮಣ ಪರಿಷತ್ ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ್ ಹೆಬ್ಬಾರ್, ರಾಮಚಂದ್ರ ವರ್ಣ ಮತ್ತು ಮಿತ್ರದಳದ ಕಾರ್ಯದರ್ಶಿ ಚಿದಂಬರ ಉಡುಪ ಮುಖ್ಯ ಅತಿಥಿಗಳಾಗಿದ್ದು ಶುಭಕೋರಿದರು. ಮಿತ್ರದಳದ ಉಪಾಧ್ಯಕ್ಷ ಕೃಷ್ಣಾನಂದ ಪೈ, ದ್ರಾವಿಡ ಬ್ರಾಹ್ಮಣ ಪರಿಷತ್, ಶ್ರೀ ಶಂಕರ ಜಯಂತಿ ಸಮಿತಿ ಮತ್ತಿತರ ಸಂಘ – ಸಂಸ್ಥೆಗಳವರು ಉಪಸ್ಥಿತರಿದ್ದರು.

ಸೀತಾರಾಮ ಧನ್ಯ ಕಾರ್ಯಕ್ರಮ ನಿರ್ವಹಿಸಿ, ಕೆ. ಜಿ. ವೈದ್ಯ ವಂದಿಸಿದರು.