ಡೈಲಿ ವಾರ್ತೆ: 28/ಆಗಸ್ಟ್/2024

ಬಂಟ್ವಾಳ ‌ಬಿಜೆಪಿ ಯುವ ಮೋರ್ಚಾ ವತಿಯಿಂದ ಪೊಲೀಸ್ ಇಲಾಖೆ ಹಾಗೂ ರಾಜ್ಯ ಕಾಂಗ್ರೆಸ್ ನ ವಿರುದ್ಧ ಪ್ರತಿಭಟನೆ

ಬಂಟ್ವಾಳ ; ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜ‌ ಅವರ ದೇಶದ್ರೋಹದ ಹೇಳಿಕೆ ಹಾಗೂ ರಾಜ್ಯಪಾಲರ ವಿರುದ್ದ ಅವ್ಯಾಚ್ಚ ಶಬ್ದ ಬಳಕೆಯ ವಿರುದ್ಧ ಯುವ ಮೋರ್ಚಾವು ಬಂಟ್ವಾಳ ಠಾಣೆಗೆ ದೂರು ನೀಡಿದರೂ, ಎಫ್.ಐ.ಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುವ ಪೊಲೀಸ್ ಇಲಾಖೆ ಹಾಗೂ ರಾಜ್ಯ ಕಾಂಗ್ರೆಸ್ ನ ವಿರುದ್ಧ ಬಂಟ್ವಾಳ ‌ಬಿಜೆಪಿ ಯುವಮೋರ್ಚಾ ವತಿಯಿಂದ ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿಕಾಶ್ ಪುತ್ತೂರು ಮಾತನಾಡಿ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವ ಕಾಂಗ್ರೇಸ್ ನಾಯಕರೇ , ಬಿಜೆಪಿಯ ಕಾರ್ಯಕರ್ತರು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕಚೇರಿಯೊಳಗೆ ನುಗ್ಗಿ ಎಳೆದುಕೊಂಡು ಬರುವ ಶಕ್ತಿ ಇದೆ ಎಂದ ಅವರು ಸಿದ್ದರಾಮಯ್ಯ ಒಬ್ಬ ಆಯೋಗ್ಯ ಮುಖ್ಯಮಂತ್ರಿ , ಐವನ್ ಡಿ.ಸೋಜ ಅಯೋಗ್ಯನ ಚೇಲಾಗಳು ಎಂದು ಲೇವಡಿ ಮಾಡಿದರು.

ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ‌ಯುವ ಮೋರ್ಚಾದ ಆಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್ ಹಾಗೂ ಜಿಲ್ಲಾ ಪದಾಧಿಕಾರಿಗಳು, ಹಿರಿಯ ನಾಯಕರುಗಳು , ಮಂಡಲ ಪದಾಧಿಕಾರಿಗಳು, ಮೋರ್ಚಾದ ಪದಾಧಿಕಾರಿಗಳು, ಪ್ರಕೋಷ್ಟದ ಸಂಚಾಲಕರು, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್, ಐವನ್ ಡಿ’ಸೋಜ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು.