ಡೈಲಿ ವಾರ್ತೆ: 29/ಆಗಸ್ಟ್/2024

ಬಿ.ಸಿ.ರೋಡ್ : ಒಕ್ಕೂಟ ವ್ಯವಸ್ಥೆಯನ್ನು ಆಸ್ಥಿರಗೊಳಿಸುತ್ತಿರುವ ಪ್ರಜಾತಂತ್ರಕ್ಕೆ ಮಾರಕವಾಗಿರುವ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಆಗ್ರಹಿಸಿ ಸಿಪಿಐ ಪ್ರತಿಭಟನೆ.

ಬಂಟ್ವಾಳ : ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ರಾಜಕೀಯವಾಗಿ ದುರ್ಬಳಕೆ ಯಾಗುತ್ತಿರುವ ಹಾಗೂ ಪ್ರಜಾತಂತ್ರಕ್ಕೆ ಮಾರಕವಾಗಿರುವ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಸಂವಿಧಾನಾತ್ಮಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬುಧವಾರ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್‌ ಕುಮಾರ್‌ ಬಂಟ್ವಾಳ್‌ ಮಾತನಾಡಿ, ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಬಹುಮತ ಪಡೆದು ಆಯ್ಕೆಯಾದ ಒಂದು ಚುನಾಯಿತ ರಾಜ್ಯ ಸಕಾ೯ರವನ್ನುಕೇಂದ್ರ ಸರ್ಕಾರದಿಂದ ನೇಮಕ ಮಾಡಲ್ಪಟ್ಟ ರಾಜ್ಯಪಾಲರ ಮೂಲಕ ಅಸ್ಥಿರಗಳಿಸಲು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕುಟಿಲ ರಾಜಕೀಯ ನೀತಿಯಿಂದ ಸಾಬೀತಾಗುತ್ತಿದೆ ಎಂದರು.

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮೈಸೂರು ಅಭಿವ್ರದ್ದಿ ಪ್ರಾಧಿಕಾರ (ಮೂಡ) ದ ಬದಲಿ ನಿವೇಶನ ಹಂಚಿಕೆ ಪ್ರಕರಣವಾಗಲಿ ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ ಪ್ರಕರಣವಾಗಲಿ ಇವುಗಳ ಕುರಿತು ನ್ಯಾಯಾಂಗದ ಚೌಕಟ್ಟಿನಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಸಹ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಆಗ್ರಹಿಸುತ್ತದೆ ಎಂದ ಅವರು ಮೂಡಾ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂ಼ಶನ್‌ ಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸ್ವಷ್ಟವಾಗಿ ಕಂಡುಬರುತ್ತಿದೆ,

ಈ ಹಿಂದೆ ರಾಜ್ಯದ ಹಲವು ಭ್ರಷ್ಟಚಾರಗಳ ಕುರಿತಾದ ಪ್ರಕರಣಗಳ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿ ಪ್ರಕರಣಗಳ ತನಿಖೆಗೆ ಅನುಮತಿ ನೀಡುವಂತೆ ಕೋರಿ ಹಲವು ವರ್ಷಗಳು ಕಳೆದರೂ ಇಂದಿನ ಯಾವುದೇ ದೂರುಗಳ ಬಗ್ಗೆಯೂ ಕ್ರಮ ಕೈಗೊಳ್ಳದೆ ಇರುವ ರಾಜ್ಯಪಾಲರು ಕೇವಲ ಒಬ್ಬ ವ್ಯಕ್ತಿ ನೀಡಿದ ದೂರನ್ನು ಆಧರಿಸಿ ದೂರು ಸ್ವೀಕರಿಸಿದ ದಿನವೇ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯಮಂತ್ತಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ, ತದನಂತರ ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಿರುವುದನ್ನು ಗಮನಿಸಿದರೆ ರಾಜ್ಯಪಾಲರ ತೀರ್ಮಾನ ಸಂಪೂಣವಾಗಿ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್‌ ಮಾತನಾಡಿ, ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಸೂಚನೆಯಂತೆ ಕೇವಲ ರಾಷ್ಟ್ರಪತಿಗಳಿಂದ ನೇಮಿಸಲ್ಪಟ್ಟು ಸೀಮಿತ ಅಧಿಕಾರ ಹೊಂದಿದ್ದರೂ ಸಹ ರಾಜ್ಯ ಪಾಲರು ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತಾಸಕ್ತಿ, ನಿರ್ದೇಶನಕ್ಕೆ ಅನುಗುಣವಾಗಿಯೇ ಕೆಲಸ ಮಾಡುತ್ತಾರೆ. ಭಾರತದ ಪ್ರಜಾಸತ್ತೆಯ ಇತಿಹಾಸವನ್ನು ಗಮನಿಸಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಸರಕಾರವು ತನಗಾಗದೇ ಇರುವ ರಾಜ್ಯದಲ್ಲಿ ಆಡಳಿತ ನಡೆಸುವ ಮತ್ತೊಂದು ಪಕ್ಷದ ಸರಕಾರಗಳನ್ನು ವಜಾಗೊಳಿಸಿರುವ ಉದಾಹರಣೆಗಳು ಇದೆ. 1959 ರಲ್ಲಿ ಕೇರಳ ರಾಜ್ಯ ಸರಕಾರವನ್ನು ವಜಾಗೊಳಿಸಿರುವುದರಿಂದ ಹಿಡಿದು ಹಲವು ಸಂದರ್ಭಗಳಲ್ಲಿ ಸಂವಿಂಧಾನದ 356 ಕಲಂ ಬಳಸಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸಲಾಗಿದೆ ರಾಜ್ಯ ಪಾಲರ ಹುದ್ದೆ ಅನಾವಶ್ಯಕವಾಗಿದ್ದು ಈ ಹುದ್ದೆಗಾಗಿ ಜನರಿಂದ ಸಂಗ್ರಹಿಸಿದ ಅಪಾರ ಹಣವು ಅನಾವಶ್ಯಕವಾಗಿಯೇ ವ್ಯಯವಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಗೂ ಮುನ್ನ ಪಕ್ಷದ ಬಿ.ಸಿ.ರೋಡು ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು. ಸೇತೃತ್ವವನ್ನು ಸಿಪಿಐ ತಾಲೂಕು ಸಮಿತಿ ಸದಸ್ಯ ಎಂ ರಾಮ ಮುಗೇರ, ಉಮಾಮತಿ ಕುರ್ನಾಡು, ಶಮಿತ, ಸರೋಜಿನಿ ಕುರಿಯಾಳ, ಭಾರತೀಯ ಮಹಿಳಾ ಒಕ್ಕೂಟದ ನಾಯಕಿ ಕೇಶವತಿ, ರೇವತಿ ಎಸ್‌, ಮೋಹಿನಿ, ನಯನ ಕೆ, ಭೋಜ ಕರಂಬೇರ, ಎಂ.ಬಿ.ಬಾಸ್ಕರ, ಯುವಜನ ಫೆಡರೇಶನ್‌ (ಎಐವೈಎಫ್)‌ ನ ಹರ್ಷಿತ್‌, ಮೋಹನ ಅರಳ, ಸೀತರಾಮ ವಿಟ್ಲ. ಓ.ಕೃಷ್ಣ, ಮುಂತಾದವರು ವಹಿಸಿದ್ದರು.

ಸಿಪಿಐ ಬಂಟ್ವಾಳ ತಾಲೂಕು ಸಹ ಕಾರ್ಯದರ್ಶಿ ಪ್ರೇಮನಾಥ ಕೆ ಸ್ವಾಗತಿಸಿ, ಭಾರತಿ ಪ್ರಶಾಂತ್‌ ವಂದಿಸಿದರು.