ಡೈಲಿ ವಾರ್ತೆ: 31/ಆಗಸ್ಟ್/2024

ತೀರ್ಥಹಳ್ಳಿ: ಕಾಲೇಜು ವಿದ್ಯಾರ್ಥಿ ನಾಪತ್ತೆ- ತುಂಗಾ ನದಿ ಬಳಿ ಬೈಕ್ ಪತ್ತೆ

ತೀರ್ಥಹಳ್ಳಿ: ಯುವಕನೊರ್ವ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕೆಲವೊಂದು ಮಾಹಿತಿ ಹಂಚಿಕೊಂಡು ನಾಪತ್ತೆ ಆಗಿದ್ದಾನೆಯೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾನಾ? ಎಂಬ ಅನುಮಾನ ಶುರುವಾಗಿದೆ.

ನಾಪತ್ತೆಯಾದ ಯುವಕ ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಯದೀಪ್ (24) ಎಂದು ತಿಳಿದು ಬಂದಿದೆ.

ಈತ ತುಂಗಾ ನದಿಗೆ ಹಾರಿ ತನ್ನ ಜೀವವನ್ನು ಕಳೆದುಕೊಂಡನೇ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಪೂರಕವೆಂಬಂತೆ ಆತನ ಬೈಕ್ ಸೇತುವೆ ಬಳಿಯಲ್ಲಿ ಸಿಕ್ಕಿದ್ದು ಆತ ಏನಾದ ಎಂಬ ಪ್ರೆಶ್ನೆ ಕಾಡತೊಡಗಿದೆ.
ಸ್ಟೇಟಸ್ ಹಾಕಿರುವುದು ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ಇದ್ದರೂ ಆತ ಬೇರೆ ಕಡೆ ಏನಾದರು ಹೋಗಿದ್ದಾನಾ? ಎಂಬ ಅನುಮಾನ ಕೂಡ ಇದೆ. ಒಂದು ವೇಳೆ ಆತ ನದಿಗೆ ಹಾರಿದ್ದೇ ಆದರೆ ತುಂಗಾ ನದಿಯಳ್ಳಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಹುಡುಕಾಟ ನಡೆಸುವುದು ಅಷ್ಟು ಸುಲಭವಲ್ಲ. ಆದರೂ ಸ್ಥಳದಲ್ಲಿ ಅಗ್ನಿಶಾಮಾಕ ತಂಡ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ನಡೆದಿರುವುದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.

ವಾಟ್ಸಾಪ್ ಸ್ಟೇಟಸ್ ನಲ್ಲಿ ಏನಿದೆ ?
ಇನ್ನು ಸ್ವಲ್ಪ ದಿನದಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಳ್ಳೆಯ ವಿದ್ಯಾರ್ಥಿ ಕೂಡ, ರ‍್ಯಾಂಕ್‌ ಬರುವ ಚಾನ್ಸ್ ಕೂಡ ಇತ್ತು. ಆದರೆ ಅದು ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಿದ್ದೀನಿ ಅಂತ ಬೇಜಾರಾಗಬೇಡಿ, ನನ್ನ ಸಾಲ ನಿಮ್ಮ ಮೇಲೆ ಹಾಕುತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ ನನ್ನ ಬೈಕ್ ಮಾರಿ ಸ್ವಲ್ಪ ಅಡ್ಜಸ್ಟ್ ಮಾಡಿ ಎಲ್ಲರಿಗೂ ಕೊಡಿ. ನನ್ನ ಜೀವನನೇ ಒಂದು ರೀತಿಯ ಉಪ್ಪಿಲ್ಲದ ಊಟದ ರೀತಿ, ಸುಮಾರು 3 ವರ್ಷದಿಂದ ಆಗಿದೆ. ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ, ಸಣ್ಣ ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು, ಒನ್ ಸೈಡ್ ನಾನು ಲವ್ ಮಾಡಿದ್ದೆ ಅವಳು ಒಪ್ಪಿಲ್ಲ. ಒಂದು ಸಣ್ಣ ತಪ್ಪು ಇವತ್ತು ನನ್ನ ಸಾವಿನ ಕಡೆ ತಳ್ಳುತ್ತಿದೆ.
ಒಳ್ಳೆ ಕೆಲಸ ಹುಡುಕುವುದರಲ್ಲೂ ವಿಫಲನಾದೆ ಇತ್ತೀಚಿನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೆರೇಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ ಊರು ಬಿಡೊದಕ್ಕಿಂತ ಸಾವೇ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ ಸಾರೀ ಪ್ಲೀಸ್ ಕ್ಷಮಿಸಿ ಬಿಡಿ ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.