ಡೈಲಿ ವಾರ್ತೆ: 23/Sep/2024

ಉಡುಪಿ: ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ

ಉಡುಪಿ: ದೊಡ್ಡಣಗುಡ್ಡೆ ಬಬ್ಬುಸ್ವಾಮಿ ಗುಡಿಯ ಬಳಿ ಇರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದಾರೆ.

ಕಟ್ಟಡ ನವೀಕರಣ ಕೆಲಸ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದ್ದು, ಇಲ್ಲಿ ಅದೃಷ್ಟವಶಾತ್ ರೋಗಿಗಳು ಯಾರೂ ಇರಲಿಲ್ಲ. ಬೆಳಗ್ಗೆ ದೈನಂದಿನ ಕೆಲಸಕ್ಕೆ ಬರುವರು ಅಡುಗೆ ಕೋಣೆಯಲ್ಲಿ ಕೆಲಸ ಪ್ರಾರಂಭಿಸುವಾಗ ಹಾಲ್ ನೊಳಗೆ ಶಬ್ದ ಕೇಳಿ ಬಂದಿದ್ದು ಹೊರಗೆ ಬಂದು ನೋಡುವಾಗ ಬೆಂಕಿ ಹತ್ತಿಕೊಂಡಿತ್ತು.

ಕೂಡಲೇ ವೈದ್ಯರಿಗೆ ಫೋನ್ ಮಾಡಿ ತಿಳಿಸಿದ್ದು, ಅಗ್ನಿಶಾಮಕ ದಳದವರಿಗೆ ತಿಳಿಸಲಾಗಿದೆ. ಮೊದಲ ಫ್ಲೋರ್ ನಲ್ಲಿ ಇಬ್ಬರು ಕೆಲಸದವರು ಉಳಿದುಕೊಂಡಿದ್ದು ಅವರು ಹೊರಗೆ ಬಂದಿರುವರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಂತ ಹೇಳಲಾಗಿದ್ದು, ಎರಡು ಫೈರ್ ಎಂಜಿನ್ ಗಳನ್ನು ಬಳಸಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆಯಿಂದ ಬೆಂಕಿ ತಹಬದಿಗೆ ಬಂದಿದೆ.