ಡೈಲಿ ವಾರ್ತೆ: 24/Sep/2024

ಆಸ್ತಿ ವಿವಾದ: ತಂಗಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಅಣ್ಣ

ಗದಗ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿದ ಅಣ್ಣನೊಬ್ಬ ನಂತರ ಪೊಲೀಸರಿಗೆ ಶರಣಾದ ಘಟನೆ ಮುಂಡರಗಿ ಪಟ್ಟಣದಲ್ಲಿ ಸೆ.24ರ ಮಂಗಳವಾರ ನಡೆದಿದೆ.

ಮೃತಪಟ್ಟ ಮಹಿಳೆ ಕಾವ್ಯಾ (32) ಎಂದು ಗುರುತಿಸಲಾಗಿದೆ
ಈಶಪ್ಪ ಕ್ಯಾದಗಿಹಳ್ಳಿ ಕೊಲೆ ಮಾಡಿದ ಆರೋಪಿ.

ಅನ್ಯಕೋಮಿನ ಯುವಕ ಪ್ರಶಾಂತ ಹಡಪದ (37) ಎಂಬವರ ಜೊತೆ ಮದುವೆಯಾಗಿದ್ದ ಯುವತಿ ಕಾವ್ಯಾ, ಆಸ್ತಿಗಾಗಿ ಅಣ್ಣ ಈಶಪ್ಪನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಳು.
ಮನೆಗೆ ಬಂದ ತಂಗಿ ಕಾವ್ಯಾ ಅಣ್ಣ ಈಶಪ್ಪನೊಂದಿಗೆ ವಾಗ್ವಾದ ನಡೆಸಿದ್ದಾಳೆ ಎನ್ನಲಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಅಣ್ಣ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.