ಡೈಲಿ ವಾರ್ತೆ: 08/OCT/2024
ಉದ್ಯಮಿ ಮುಮ್ತಾಝ್ ಅಲಿ ಸಾವಿನ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ಸುರತ್ಕಲ್: ಉದ್ಯಮಿ ಮುಮ್ತಾಝ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸರು ಎ1 ಆರೋಪಿ ರಹಮತ್ ಸೇರಿ ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಮುಮ್ತಾಝ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿ A1 ಆರೋಪಿ ಸುರತ್ಕಲ್ ಕೃಷ್ಣಾಪುರ 7 ನೇ ಬ್ಲಾಕ್ ನಿವಾಸಿ ರೆಹಮತ್, ಆಕೆಯ ಪತಿ A5 ಆರೋಪಿ ಶುಐಬ್ ಹಾಗೂ ಆರೋಪಿ ಸತ್ತಾರ್ ಎಂಬವರ ಕಾರು ಚಾಲಕ ಎ 6 ಆರೋಪಿ ಸಿರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ.
ರೆಹಮತ್ ಮತ್ತು ಆಕೆಯ ಪತಿ ಶುಐಬ್ ನನ್ನು ಸೋಮವಾರ ಸಂಜೆ ಕೇರಳದಲ್ಲಿ ವಶಕ್ಕೆ ಪಡೆದಿದ್ದು, ಸಿರಾಜ್ ನನ್ನು ಕೃಷ್ಣಾಪುರದ ಆತನ ಮನೆಯಿಂದಲೇ ಸಿಸಿಬಿ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಉದ್ಯಮಿ ಮುಮ್ತಾಝ್ ಅಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್ ಸೇರಿದಂತೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.