ಡೈಲಿ ವಾರ್ತೆ: 12/OCT/2024

ಅಜಿತ್ ಪವಾರ್ ಬಣದ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ!

ಮುಂಬೈ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಬಣದ ಎನ್​ಸಿಪಿ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವಂತಹ ಘಟನೆ ಮುಂಬೈನ ಬಾಂದ್ರಾ ಪಶ್ಚಿಮ ಭಾಗದಲ್ಲಿ ನಡೆದಿದೆ.

ಎದೆ, ಹೊಟ್ಟೆ ಭಾಗಕ್ಕೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಸಿದ್ದಿಕಿರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುರಿಸೆಳೆದಿದ್ದಾರೆ.

ಶನಿವಾರ ರಾತ್ರಿ 9.15 ರ ಸುಮಾರಿಗೆ ನಿರ್ಮಲ್ ನಗರ ಪ್ರದೇಶದಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ಮಾಡಿ ಹತ್ಯೆಗೈಯಲಾಗಿದೆ. ಬಾಬಾ ಸಿದ್ದಿಕಿ ಕಚೇರಿ ಸಮೀಪದ ರಾಮಮಂದಿರ ಬಳಿಯೇ ಕೃತ್ಯವೆಸಗಲಾಗಿದೆ. ಬಾಬಾ ಸಿದ್ದಿಕಿ ಮೇಲೆ ಎರಡು ಮೂರು ಸುತ್ತು ಗುಂಡು ಹಾರಿಸಲಾಗಿದೆ. ಅದರಲ್ಲಿ ಒಂದು ಗುಂಡು ಅವರ ಎದೆಗೆ ತಗುಲಿತು. ಸದ್ಯ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಬಾ ಸಿದ್ದಿಕಿ ಜೊತೆಗಿದ್ದ ಸಹೋದ್ಯೋಗಿ ಕಾಲಿಗೆ ಕೂಡ ಗುಂಡು ತಗುಲಿದೆ. ಸದ್ಯ ವಿಡಿಯೋ ಒಂದು ವೈರಲ್ ಆಗಿದೆ. ಕಳೆದ 15 ದಿನಗಳ ಹಿಂದೆ ಬಾಬಾ ಸಿದ್ದಿಕಿ ಅವರಿಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಬಾಬಾ ಸಿದ್ದಿಕಿ ನಿಧನದ ಸುದ್ದಿ ತಿಳಿದ ತಕ್ಷಣ ಸಾಕಷ್ಟು ಕಾರ್ಯಕರ್ತರು ಆಸ್ಪತ್ರೆ ಎದುರು ಜಮಾಯಿಸಿದ್ದಾರೆ. ಆಶಿಶ್ ಶೇಲಾರ್ ಇತ್ತೀಚೆಗೆ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಾಬಾ ಸಿದ್ದಿಕಿ ಶಾಸಕ ಜೀಶನ್ ಸಿದ್ದಿಕಿ ಅವರ ತಂದೆ. ಕೆಲ ದಿನಗಳ ಹಿಂದೆ ಎನ್‌ಸಿಪಿ ಸೇರಿದ್ದರು. ನಟ ಸಯಾಜಿ ಶಿಂಧೆ ಅವರ ಪಾರ್ಟಿ ಸೇರ್ಪಡೆ ಸಂದರ್ಭದಲ್ಲಿ ಅವರು ಉಪಸ್ಥಿತರಿದ್ದರು.

ಬಾಬಾ ಸಿದ್ದಿಕಿ ಯಾರು?
ಬಾಬಾ ಸಿದ್ದಿಕಿ ರಾಜಕಾರಣಿ ಮಾತ್ರವಲ್ಲದೆ ಅವರ ಹೆಸರು ಬಾಲಿವುಡ್‌ನಲ್ಲೂ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಇವರು ಆಯೋಜಿಸುವ ಇಫ್ತಾರ್ ಕೂಟ ಮನೆಮಾತಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲದೆ ಅನೇಕ ಕಿರುತೆರೆ ತಾರೆಯರು ಕೂಡ ಈ ಪಾರ್ಟಿಯಲ್ಲಿ ಭಾಗವಹಿಸುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಕೂಡ ಸಿದ್ದಿಕಿ ಅವರ ಪಾರ್ಟಿಗೆ ತಪ್ಪದೇ ಬರುತ್ತಿದ್ದರು. ಸಲ್ಮಾನ್ ಖಾನ್ ಬಾಬಾ ಸಿದ್ದಿಕಿ ಜೊತೆ ನಿಕಟ ಸಂಬಂಧ ಹೊಂದಿದ್ದರು.