ಡೈಲಿ ವಾರ್ತೆ: 16/OCT/2024

ಉಡುಪಿ: ಮುಳುಗುತಜ್ಞ ಈಶ್ವರ ಮಲ್ಪೆ ಅವರ ಇಬ್ಬರ ಮಕ್ಕಳಿಗೆ ಕೇರಳದಲ್ಲಿ ಉಚಿತ ಚಿಕಿತ್ಸೆ

ಮಲ್ಪೆ: ಮುಳುಗುತಜ್ಞ ಈಶ್ವರ್‌ ಮಲ್ಪೆ ಅವರ ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಕೇರಳ ರಾಜ್ಯದ ಸಂಘ, ಸಂಸ್ಥೆಯವರು ಮುಂದೆ ಬಂದಿದ್ದು, ಕೇರಳದ ಕೋಯಿಕ್ಕೋಡ್‌ನ‌ ಮಲ್ಟಿ ಸ್ಪೆಶಾಲಿಟಿ ಮೈತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈಶ್ವರ್‌ ಮಲ್ಪೆ ಅವರ ಇಬ್ಬರು ಮಕ್ಕಳಾದ ಕಾರ್ತಿಕ್‌ (23), ಬ್ರಾಹ್ಮಿ (7) ಅನಾರೋಗ್ಯ ಪೀಡಿತರಾಗಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಿದೆ.

ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಅರ್ಜುನ್‌ ಮೃತ ದೇಹವನ್ನು ಪತ್ತೆ ಮಾಡಲು ಈಶ್ವರ್‌ ಮಲ್ಪೆ ತಂಡ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಇವರ ಬಗ್ಗೆ ಕೇರಳದಲ್ಲಿ ಅಭಿಮಾನ ಹೆಚ್ಚಾಗಿದ್ದು, ಕುಟುಂಬದ ಸಮಸ್ಯೆಯರಿತ ಅಲ್ಲಿನ ಸಂಘ ಸಂಸ್ಥೆಯವರು ಒಟ್ಟಾಗಿ ಕುಟುಂಬವನ್ನು ಕರೆಸಿಕೊಂಡಿದ್ದಾರೆ.