ಡೈಲಿ ವಾರ್ತೆ: 22/OCT/2024

ಭಟ್ಕಳ: ಜಾನುವಾರು ಕಳ್ಳತನ – ಮೂವರು ಆರೋಪಿಗಳ ಬಂಧನ

ಭಟ್ಕಳ: ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿ ಮಂಗಳವಾರ ಬೆಳಗ್ಗೆ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಲೀಲ್ ಹುಸೇನ್ (39), ಮೊಹಮ್ಮದ್ ಹನೀಫ್ (27) ಹಾಗೂ ಜಬ್ಬಾರ್ ಹುಸೇನ್ ಬ್ಯಾರಿ (37) ಈ ಮೂವರು ಬಂಧಿತ ಆರೋಪಿಗಳು.

ಇತ್ತೀಚೆಗೆ ಜಾಲಿಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ದನಕಳ್ಳತನದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಹಿಂದೂ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ದನ ಕಳ್ಳತನದ ಪ್ರತಿಕ್ರಿಯೆಯಾಗಿ, ಸ್ಥಳೀಯ ಸಾಮಾಜಿಕ ಸಂಘಟನೆ ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್ ದನ ಕಳ್ಳರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಮತ್ತು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಕರೆ ನೀಡಿತು.

ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಲ್ಲಿ ಜಲೀಲ್ ಹುಸೇನ್ ಮತ್ತು ಮೊಹಮ್ಮದ್ ಹನೀಫ್ ಇವರನ್ನು ಭಟ್ಕಳದಲ್ಲಿ ಬಂಧಿಸಿದ್ದು ಜಬ್ಬಾರ್ ಹುಸೇನ್ ಬ್ಯಾರಿ ಅವರನ್ನು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಕದ್ದ ದನಗಳನ್ನು ಸಾಗಿಸಲು ಬಳಸಿದ್ದ ಎನ್ನಲಾದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.