ಡೈಲಿ ವಾರ್ತೆ: 25/OCT/2024

ಅ. 30 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ” – ಎಸ್ ಎನ್ ಸೇತುರಾಮ್, ಪ್ರಕಾಶ್ ಬೆಳವಾಡಿ, ಪ್ರತಾಪ್ ಸಿಂಹ ರವರು ಭಾಗಿ

ಕಾರ್ಕಳ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ ‘ಅಕ್ಷರಯಾನ – ಬರವಣಿಗೆಯ ಮೆರವಣಿಗೆ’ ಕಾರ್ಯಕ್ರಮವು ಅಕ್ಟೋಬರ್ 30ರ ಬುಧವಾರ ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದೆ.

ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ವಿ. ಸುನಿಲ್ ಕುಮಾರ್ ರವರು ಆಗಮಿಸಲಿದ್ದಾರೆ.

ಯುವ ಸಾಹಿತ್ಯಾಸಕ್ತರಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಯಲ್ಲಿ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಖ್ಯಾತ ರಂಗ ಕಲಾವಿದ, ನಟ, ನಿರ್ದೇಶಕರಾಗಿರುವ ಶ್ರೀ ಎಸ್. ಎನ್. ಸೇತುರಾಮ್ ರವರು. ಲೇಖಕ, ಕನ್ನಡ ಸಿನಿಮಾರಂಗದ ಪ್ರಮುಖ ನಿರ್ದೇಶಕ ಮತ್ತು ನಟರೂ ಆಗಿರುವ ಶ್ರೀ ಪ್ರಕಾಶ್ ಬೆಳವಾಡಿಯವರು ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ, ತೀಕ್ಷ್ಣ ಲೇಖನ ಹಾಗೂ ಯುವಪ್ರಜ್ಞೆ ಮತ್ತು ಉತ್ಸಾಹದ ಪ್ರತಿನಿಧಿಯಂತೆ ರಾಜಕೀಯದಲ್ಲೂ ತಮ್ಮ ಗುರುತು ಕಟ್ಟಿಕೊಂಡಿರುವ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹರವರು.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಯುವ ಬರಹಗಾರರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೂ ಪುಸ್ತಕಮನೆ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.