ಡೈಲಿ ವಾರ್ತೆ: 24/OCT/2024

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್‌ ಸೈಲ್‌ ದೋಷಿ ಎಂದು ಕೋರ್ಟ್‌ ತೀರ್ಪು, ನಾಳೆ ಶಿಕ್ಷೆಯ ಪ್ರಮಾಣ ಪ್ರಕಟ

ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ನ್ಯಾ.ಸಂತೋಷ್‌ ಗಜಾನನ ಭಟ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು. ಮೊದಲ ಪ್ರಕರಣದಲ್ಲಿ ಸತೀಶ್‌ ಸೈಲ್‌ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

11,312 ಮೆಟ್ರಿಕ್ ಟನ್ ನಷ್ಟು ಸೀಝ್‌ ಮಾಡಲಾದ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. 2010ರಲ್ಲಿ ಅದಿರು ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. 6 ಪ್ರಕರಣಗಳಲ್ಲೂ ಸತೀಶ್‌ ಸೈಲ್‌ ದೋಷಿ ಎಂದು ಈಗ ಕೋರ್ಟ್‌ ತೀರ್ಪಿತ್ತಿದೆ.
ಜನಪ್ರತಿನಿಧಿಗಳ ನ್ಯಾಯಾಧೀಶರು, ಎಲ್ಲಾ ಅಪರಾಧಿಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ (ಅ.25) ಪ್ರಕಟಿಸಲಾಗುವುದು.

ತೀರ್ಪು ಹೊರಬೀಳುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಕೋರ್ಟ್‌ ಬಳಿ ಹಾಜರಾದರು. ಯಾವುದೇ ಕ್ಷಣದಲ್ಲಿ ಸತೀಶ್‌ ಸೈಲ್‌ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡುವ ಸಾಧ್ಯತೆ ಇದೆ.