ಡೈಲಿ ವಾರ್ತೆ: 25/OCT/2024

ಅಜೆಕಾರು: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಪ್ರಕರಣ: ಆರೋಪಿ ಪತ್ನಿ ಸಹಿತ ಇಬ್ಬರ ಬಂಧನ

ಅಜೆಕಾರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ವಿಷ ಉಣಿಸಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಮರ್ಣೆ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಬಾಲಕೃಷ್ಣ (44) ಎಂದು ಗುರುತಿಸಲಾಗಿದೆ. ಇವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನದ ದಿಲೀಪ್ ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ: ಪಿರ್ಯಾದಿದಾರರಾದ ರಾಮಕೃಷ್ಣ (42), ಮರ್ಣೆ ಗ್ರಾಮ, ಕಾರ್ಕಳ ಇವರ ಅಣ್ಣ ಬಾಲಕೃಷ್ಣ (44) ರವರಿಗೆ ಕಳೆದ 25 ದಿನಗಳಿಂದ ಜ್ವರ ಮತ್ತು ವಾಂತಿ ಶುರುವಾಗಿದ್ದು ಈ ಬಗ್ಗೆ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರಿಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಮಂಗಳೂರು ವೆನ್ಲಾಕ್‌ ಆಸ್ಪತ್ರೆ, ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಗುಣಮುಖರಾಗದ ಕಾರಣ ಅ. 19 ರಂದು ರಾತ್ರಿ ಮನೆಗೆ ಕರೆತಂದಿರುತ್ತಾರೆ. ದಿನಾಂಕ ಅ. 20 ರಂದು ಬೆಳಗಿನ ಜಾವ 3:30 ಗಂಟೆಗೆ ಬಾಲಕೃಷ್ಣ ರವರು ಮೃತಟ್ಟಿರುತ್ತಾರೆ.

ಬಾಲಕೃಷ್ಣ ರವರ ಹೆಂಡತಿ ಪ್ರತಿಮಾಳಿಗೆ ಈ ಮೊದಲು ಹಿರ್ಗಾನದ ದಿಲೀಪ ಎಂಬಾತನ ಜೊತೆ ಗೆಳೆತನ ಇದ್ದು, ಬಾಲಕೃಷ್ಣರು ಒಮ್ಮೆಲೆ ಅಸೌಖ್ಯ ಉಂಟಾಗಿ ಮೃತಪಟ್ಟಿದ್ದರಿಂದ ಸಂಶಯದಿಂದ ಪ್ರತಿಮಳ ಅಣ್ಣ ಸಂದೀಪನು ಪ್ರತಿಮಳಲ್ಲಿ ಪದೇ ಪದೇ ವಿಚಾರಿಸಿದ್ದು, ಈ ಸಮಯ ಪ್ರತಿಮಳು ಅವಳ ಮತ್ತು ದಿಲೀಪ ಅವರ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣನನ್ನು ಕೊಲೆ ಮಾಡಲು ಯೋಚಿಸಿ ಅವರು ಮಾತನಾಡಿಕೊಂಡು ತಾನು ಹೇಳಿದಂತೆ ದಿಲೀಪ ಹೆಗ್ಡೆಯು ಯಾವುದೋ ವಿಷ ಪದಾರ್ಥ ತಂದು ಇದನ್ನು ಬಾಲಕೃಷ್ಣನಿಗೆ ಊಟದಲ್ಲಿ ಹಾಕಿ ಕೊಡು ಅವನು ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ತನಗೆ ಕೊಟ್ಟಿದ್ದು, ಇದನ್ನು ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿರುತ್ತೇನೆ. ನಂತರ ಬಾಲಕೃಷ್ಣರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ಅ.20 ರಂದು ಬೆಳಗಿನ ಜಾವ 01:30 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಅಲ್ಲಿಯೆ ಇದ್ದ ಬೆಡ್‌ಶೀಟ್‌ನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಹೇಳಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2024 ಕಲಂ: 61(1)(a), 103, 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.