ಡೈಲಿ ವಾರ್ತೆ: 27/OCT/2024

ಆಕಸ್ಮಿಕ ಅಗ್ನಿ ದುರಂತ: ಜತೆಯಲ್ಲಿ ಮಲಗಿದ್ದ ನಾಲ್ವರು ಸ್ನೇಹಿತರು ಸುಟ್ಟುಕರಕಲು!

ಹರ್ಯಾಣ: ಬೆಂಕಿ ಅವಘಡ ಸಂಭವಿಸಿ ಒಂದೇ ಕೋಣೆಯಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸರಸ್ವತಿ ಎನ್‌ಕ್ಲೇವ್‌ನಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಅಮನ್ (17), ಸಾಹಿಲ್ (22), ನೂರ್ ಆಲಂ (27), ಮತ್ತು ಮೊಹಮ್ಮದ್ ಮುಷ್ತಾಕ್ (28) ಎಂದು ಗುರುತಿಸಲಾಗಿದೆ. ಮೃತರು ಬಿಹಾರದ ನಿವಾಸಿಗಳಾಗಿದ್ದು, ಬಾಡಿಗೆ ಮನೆಯ ಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಅಮನ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇತರರು ಗಾರ್ಮೆಂಟ್ ರಫ್ತು ಕಂಪನಿಯಲ್ಲಿ ಟೈಲರ್‌ಗಳಾಗಿ ಕೆಲಸ ಮಾಡುತ್ತಿದ್ದರು.

ನಾಲ್ವರು ಒಂದೇ ಕೋಣೆಯಲ್ಲಿ ಮಲಗಿದ್ದರು ಈ ವೇಳೆ ಹೊಗೆ ಕಾಣಿಸಿಕೊಂಡು ಕೋಣೆಗೆ ಬೆಂಕಿ ತಗುಲಿದೆ. ಪರಿಣಾಮ ನಾಲ್ವರು ಹೊರಗೆ ಬರಲಾರದೆ ಸಿಲುಕಿಕೊಂಡಿದ್ದಾರೆ. ಬೆಂಕಿ ತಗುಲಿ ನಾಲ್ವರು ಸುಟ್ಟುಕರಕಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರು ಪಕ್ಕದ ಕೋಣೆಯಲ್ಲಿದ್ದರು ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿರಬಹುದೆಂದು ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ಹೇಳಿದ್ದಾರೆ.
ಅಗ್ನಿಶಾಮಕ ಠಾಣೆ ಕೇವಲ 500 ಮೀಟರ್ ದೂರವಿದ್ದರೂ, 30 ನಿಮಿಷಗಳ ನಂತರ ಆಗಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.