ಡೈಲಿ ವಾರ್ತೆ: 28/OCT/2024

ಕೋಟ: ಕಾವಡಿಯಲ್ಲಿ ಹೆಜ್ಜೇನು ದಾಳಿ – ಶಿಕ್ಷಕಿ ಗಂಭೀರ – ಜೀವ ಉಳಿಸಿದ ಆಪತ್ಬಾಂಧವ ಪ್ರಸಾದ್ ಮೆಂಡನ್

ಕೋಟ: ಹೆಜ್ಜೇನು ದಾಳಿಯಿಂದ ಶಾಲೆ ಶಿಕ್ಷಕಿಯೋರ್ವರು ಗಂಭೀರ ಗಾಯ ಗೊಂಡ ಘಟನೆ ಅ. 28 ರಂದು ಸೋಮವಾರ ಮಧ್ಯಾಹ್ನ ಬ್ರಹ್ಮಾವರ ತಾಲೂಕಿ ಕಾವಡಿ ಗ್ರಾಮದಲ್ಲಿ ನಡೆದಿದೆ.

ಹೆಜ್ಜೇನು ದಾಳಿಗೊಳಗಾದ ಶಿಕ್ಷಕಿ ಚುಕ್ಕಿ ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರ ವಲಯದ ಕಾವಡಿ ಸ.ಹಿ.ಪ್ರಾ. ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದು ಇಂದು ಮಧ್ಯಾಹ್ನ ಶಾಲೆಯಿಂದ ಮನೆಗೆ ಹೋಗಲು ನಡೆದು ಕೊಂಡು ಬರುತ್ತಿದ್ದ ಸಂದರ್ಭ ಕಾವಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಮಾನು ಹತ್ತಿರ ಸುಮಾರು 50 ರಿಂದ 100 ಹೆಜ್ಜೇನುಗಳು ಒಮ್ಮೆಲೇ ಚುಕ್ಕಿಯವರ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.


ಶಿಕ್ಷಕಿ ಸಹಾಯಕ್ಕಾಗಿ ಎಷ್ಟೇ ಕೂಗಿಕೊಂಡರೂ ಯಾರೂ ಹತ್ತಿರಕ್ಕೆ ಹೋಗದೆ ದೂರದಿಂದಲೇ ಗಮನಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ಪ್ರಸಾದ್ ಮೆಂಡನ್ ಎಂಬವರು ತನ್ನ ಜೀವದ ಹಂಗನ್ನು ತೊರೆದು ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಶಿಕ್ಷಕಿಯ ಬಳಿ ಬಂದು, ಹೆಜ್ಜೇನುಗಳಿಂದ ಆಕೆಯನ್ನು ಕಾಪಾಡಿದರು. ತಕ್ಷಣ ತನ್ನ ಕಾರಿನಲ್ಲಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸರುತ್ತಾರೆ.

ಗಂಭೀರ ಗಾಯಗೊಂಡ ಶಿಕ್ಷಕಿ ಚುಕ್ಕಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು ಚಿಕಿತ್ಸೆ ನಡೆದಿದೆ. ಗ್ರಾಮೀಣ ಪ್ರದೇಶವಾದ ಕಾವಡಿಯಂತಹ ಊರಿನ ಜನರಲ್ಲೂ ಕಷ್ಟದಲ್ಲಿರುವವರಿಗೆ ನೆರವಾಗುವ ಮಾನವೀಯತೆ ಗುಣ ಮರೆಯಾಯಿತೇ!? ನೂರಾರು ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕಿಯ ಪಾಡು ಈ ನಮೂನೆಯಾಯಿತೇ? ಪ್ರಸಾದ್ ಮೆಂಡನ್ ರವರು ಆಪತ್ಬಾಂಧವರಂತೆ ಬಾರದಿದ್ದರೆ ಆಕೆಯ ಸ್ಥಿತಿ ಏನಾಗುತ್ತಿತ್ತೋ….