ಡೈಲಿ ವಾರ್ತೆ: 11/ಫೆ. /2025

ಉಡುಪಿ| ಅಕ್ರಮವಾಗಿ ಜಾನುವಾರು ಸಾಗಾಟದ ಟೆಂಪೊ ಪಲ್ಟಿ- ಇಬ್ಬರಿಗೆ ಗಾಯ

ಉಡುಪಿ| ತರಕಾರಿ ಸಾಗಾಟದ ಟೆಂಪೊದಲ್ಲಿ ಅಕ್ರಮವಾಗಿ ಎಮ್ಮೆಗಳನ್ನು ಸಾಗಿಸುತ್ತಿದ್ದಾಗ ಮಗುಚಿ ಬಿದ್ದ ಪರಿಣಾಮ ಇಬ್ಬರು ಹಾಗೂ ಎರಡು ಎಮ್ಮೆಗಳು ಗಾಯಗೊಂಡ ಘಟನೆ ಅಂಬಾಗಿಲು ಜಂಕ್ಷನ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಗಾಯಗೊಂಡವರನ್ನು ಶೀತಲ್ ಗಣಪತಿ ಬಾಗಣ್ಣರ ಹಾಗೂ ಯಮನಪ್ಪ ರಮೇಶ್ ಅರ್ಜುನವಾಡ ಎಂದು ತಿಳಿದಬಂದಿದೆ. ಇನ್ನೋರ್ವ ಪರಶು ಎಂಬಾತ ಓಡಿ ಪರಾರಿಯಾಗಿದ್ದಾನೆ. ಟೆಂಪೋದಲ್ಲಿದ್ದ ಐದು ಎಮ್ಮೆಗಳ ಪೈಕಿ ಎರಡು ಎಮ್ಮೆಗಳು ಗಾಯಗೊಂಡಿವೆ.

ಇವರು ಅಕ್ರಮವಾಗಿ ಎಮ್ಮೆಗಳನ್ನು ಸಂಕೇಶ್ವರದಿಂದ ಮಂಗಳೂರಿಗೆ ಸಾಗಿಸುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೊ ರಸ್ತೆಯಲ್ಲಿ ಮಗುಚಿ ಬಿತ್ತೆನ್ನಲಾಗಿದೆ. ಗಾಯಾಳು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.