


ಡೈಲಿ ವಾರ್ತೆ: 14/ಮಾರ್ಚ್ /2025


ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ

ಬೆಳಗಾವಿ| ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಮತ್ತೆ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹೋಳಿ ಹಬ್ಬದ ದಿನವೇ ಕರ್ನಾಟಕ, ಮಹಾರಾಷ್ಟ್ರ ಬಸ್ಗೆ ಮಹಾರಾಷ್ಟ್ರದಲ್ಲಿ ಪುಂಡರು ಬಾಟಲಿ ಹೊಡೆದಿದ್ದಾರೆ.
ಬಸ್ಗಳ ಗಾಜು ಪುಡಿ ಪುಡಿಯಾಗಿದ್ದರೆ, ಇತ್ತ ಘಟನೆ ಕುರಿತು ದೂರು ಕೂಡ ದಾಖಲಾಗಿದೆ. ಇತ್ತ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಅಂತಾ ಡಿಸಿ ಮೊಹಮ್ಮದ್ ರೋಷನ್ ಖಡಕ್ ಆಗಿ ಹೇಳಿದ್ದಾರೆ.
ಮತ್ತೆ ಗಡಿಯಲ್ಲಿ ಮಹಾ ಪುಂಡರು ಕ್ಯಾತೆ
ಹೌದು! ಮೊನ್ನೆಯಷ್ಟೇ ಮರಾಠಿಯಲ್ಲಿ ಮಾತನಾಡಲಿಲ್ಲ ಅಂತಾ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆದು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಂದು ವಾರಗಳ ಕಾಲ ಉಭಯ ರಾಜ್ಯಗಳಿಗೆ ಬಸ್ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಗಡಿಯಲ್ಲಿ ಮಹಾ ಪುಂಡರು ಕ್ಯಾತೆ ಶುರು ಮಾಡಿದ್ದಾರೆ. ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ಪುಂಡಾಟ ಪ್ರದರ್ಶಿಸಿದ್ದಾರೆ.
ಹಲ್ಲೆಗೆ ಮೊದಲು ಭಾಷೆಗೆ ಸಂಬಂಧಿಸಿದ ತಗಾದೆ ಶುರುವಾಗಿದ್ದು ಸತ್ಯ: ಪೊಲೀಸ್
ಇಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಪುಂಡಾಟ ಮೆರದಿದ್ದಾರೆ. ಪುಂಡರ ಗುಂಪೊಂದು ಏಕಾಏಕಿ ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ ಮಾಡಿದ್ದಾರೆ. ನಿತ್ಯ ಇಚಲಕರಂಜಿ ಚಿಕ್ಕೋಡಿ ರಾಯಬಾಗ ಜಮಖಂಡಿ ನಡುವೆ ಸಂಚರಿಸುತ್ತಿದ್ದ ಬಸ್ ಇದಾಗಿದ್ದು ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬಸ್ ಮೇಲೆ ಬಾಟಲ್ ತೂರಿದ್ದು ಬೆಳಕಿಗೆ ಬಂದಿದೆ. ಇದರಿಂದ ರಾಯಬಾಗ ಡಿಪೋದ ಒಂದು ಕರ್ನಾಟಕ ಬಸ್ನ ಗಾಜು ಪುಡಿ ಪುಡಿ ಆಗಿದ್ದರೆ, ಮತ್ತೊಂದೆಡೆಗೆ ಮಹಾರಾಷ್ಟ್ರದ 6 ಬಸ್ ಗಳು ಸಹ ಜಖಂಗೊಂಡಿವೆ.
ಆರಂಭದಲ್ಲಿ ಕರ್ನಾಟಕ ಬಸ್ಗೆ ಪುಂಡರು ಗಡಿ ವಿವಾದ ವಿಚಾರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ರಭಸವಾಗಿ ಹರಡಿತ್ತು. ಆದರೆ ಹೋಳಿ ಹಬ್ಬದ ಪ್ರಯುಕ್ತ ಎರಡು ಗುಂಪುಗಳ ಗಲಾಟೆಯಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಇಂಚಲಕರಂಜಿ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪ್ರಕರಣ ಸಂಬಂಧ 20 ಜನ ಕೀಡಗೇಡಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಂತಾ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ. ಇನ್ನೂ ಘಟನೆ ಕುರಿತು ಬಸ್ ಡ್ರೈವರ್ ಕೂಡ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.