


ಡೈಲಿ ವಾರ್ತೆ: 29/ಮಾರ್ಚ್ /2025


ಕೊಡಗು| ಪೊಲೀಸರ ಮಿಂಚಿನ ಕಾರ್ಯಾಚರಣೆ: ನಾಲ್ವರನ್ನು ಹತ್ಯೆಗೈದ ಆರೋಪಿಯ ಬಂಧನ

ಮಡಿಕೇರಿ: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಪತ್ನಿ ಸೇರಿದಂತೆ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಗಿರೀಶ್ ನನ್ನು ಮಿಂಚಿನ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕೇರಳ ರಾಜ್ಯದ ತಲಪುಳ ಎಂಬ ಪ್ರದೇಶದಲ್ಲಿ ಗಿರೀಶ್ (38) ನನ್ನು ವಶಕ್ಕೆ ಪಡೆದಿದ್ದಾರೆ.
ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ಒಂಟಿ ಗುಡಿಸಲಿನಲ್ಲಿ ವಾಸವಿದ್ದ ಬುಡಕಟ್ಟು ಜನಾಂಗದ ಕರಿಯ (75), ಗೌರಿ (70), ನಾಗಿ(30) ಹಾಗೂ ನಾಗಿಯ ಪುತ್ರಿ ಕಾವೇರಿ(7)ಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಗಿರೀಶ್ ತಲೆಮರೆಸಿಕೊಂಡಿರುವ ಆರೋಪದಡಿ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿ ಗಿರೀಶ್ ನಾಗಿಯ 3ನೇ ಪತಿಯಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದರು. 2ನೇ ಗಂಡನಾದ ಸುಬ್ರಮಣಿಯೊಂದಿಗೆ ನಾಗಿ ಮತ್ತೆ ಸಂಬಂಧ ಹೊಂದಿರುವ ಬಗ್ಗೆ ಸಂಶಯಗೊಂಡು ಮಾ.27ರಂದು ರಾತ್ರಿ ಗಿರೀಶ್ ನಾಲ್ವರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.