


ಡೈಲಿ ವಾರ್ತೆ: 30/ಮಾರ್ಚ್ /2025


ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನ – ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ: ದೇರಳಕಟ್ಟೆಯಲ್ಲಿರುವ ಮತ್ತೂಟ್ ಫೈನಾನ್ಸ್ ದರೋಡೆಗೆತ್ನಿಸುತ್ತಿದ್ದಾಗಲೇ ಸೈರನ್ ಮೊಳಗಿದ ಪರಿಣಾಮ ಇಬ್ಬರು ಕೇರಳ ಮೂಲದ ದರೋಡೆಕೋರರು ಲಾಕ್ ಆದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕೇರಳ ರಾಜ್ಯದ ಕಾಂಞಂಗಾಡ್ ನಿವಾಸಿ ಮುರಳಿ ಮತ್ತು ಕಾಸರಗೋಡು ನಿವಾಸಿ ಹರ್ಷದ್ ಕಟ್ಟಡದಲ್ಲಿ ಲಾಕ್ ಆಗಿ ಬಂಧಿತರಾದ ದರೋಡೆಕೋರರು.
ಶನಿವಾರ ತಡರಾತ್ರಿ ಸುಮಾರು 1.30 ಸುಮಾರಿಗೆ ದೇರಳಕಟ್ಟೆ ಜಂಕ್ಷನ್ನಲ್ಲಿರುವ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ಗೆ ಕೇರಳ ಮೂಲದ ಮೂವರು ದರೋಡೆಕೋರರು ಕನ್ನ ಹಾಕಿದ್ದಾರೆ. ಇನ್ನೇನು ಖದೀಮರು ಮಳಿಗೆಯ ಬೀಗ ಒಡೆದು, ಸಿಸಿ ಕ್ಯಾಮರಾವನ್ನು ಒಡೆದು ಹಾಕಿದಾಗ ಸೈರನ್ ಮೊಳಗಿದೆ. ಇದು ಮುತ್ತೂಟ್ ಫೈನಾನ್ಸ್ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಬೆದರಿದ ದರೋಡೆಕೋರರಲ್ಲಿ ಓರ್ವನು ಮೇಲಿನಿಂದ ಹಾರಿದಾಗ ಪೊಲೀಸರು ಹಾಗೂ ಸ್ಥಳೀಯರು ಹಿಡಿದಿದ್ದಾರೆ. ಮತ್ತೋರ್ವನು ಕಟ್ಟಡದಲ್ಲಿ ಅಡಗಿ ಕುಳಿತು ಸಿಕ್ಕಿಬಿದ್ದಿದ್ದಾನೆ. ಇನ್ನೋರ್ವನು ತಪ್ಪಿಸಿ ಪರಾರಿಯಾಗಿದ್ದಾನೆ. ಈ ವೇಳೆ ಆರೋಪಿಗಳು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಕೆ.ಸಿ.ರೋಟ್ನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ನಲ್ಲಿ ನಡೆಯಲಿದ್ದ ಸಂಭವನೀಯ ದರೋಡೆ ಪ್ರಕರಣವನ್ನು ಪೊಲೀಸರು ತಪ್ಪಿಸಿದ್ದಾರೆ.