

ಡೈಲಿ ವಾರ್ತೆ: 05/ಏಪ್ರಿಲ್ /2025


ಕುಂದಾಪುರ| ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ಕೃಷಿಕ ಸಜೀವ ದಹನ

ಕುಂದಾಪುರ: ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತನೋರ್ವ ಅದೇ ಬೆಂಕಿಗೆ ಬಿದ್ದು ಸಂಪೂರ್ಣವಾಗಿ ಸುಟ್ಟು ಮೃತಪಟ್ಟ ಹೃದಯವಿದ್ರಾವಕ ಘಟನೆ ಕುಂದಾಪುರದ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಇಂದು ನಡೆದಿದೆ.
ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ(80) ಮೃತ ದುರ್ದೈವಿಯಾಗಿದ್ದಾರೆ.
ಕೃಷಿಕರಾಗಿರುವ ಇವರು ತಮ್ಮ ಮಗಳೊಂದಿಗೆ ಕಸಕ್ಕೆ ಬೆಂಕಿ ಹಾಕಿದ್ದರು. ಅದರ ಕೆನ್ನಾಲಿಗೆ ಸುತ್ತಲೂ ಆವರಿಸಿತ್ತು. ಹತ್ತಿರದ ನಾಗಬನಕ್ಕೂ ಬೆಂಕಿ ಹಬ್ಬುವ ಸಾಧ್ಯತೆ ಇತ್ತು.
ಈ ವೇಳೆ ಬೆಂಕಿ ನಂದಿಸಲು ಹೋದ ಮಹಾಲಿಂಗ ಅವರು ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತಾದರೂ ಅಲ್ಲಿ ರಸ್ತೆ ಸರಿ ಇರದ ಕಾರಣ ಅವರು ಬರುವುದು ತಡವಾಗಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.