


ಡೈಲಿ ವಾರ್ತೆ: 08/ಏಪ್ರಿಲ್/2025


ಪಾರಂಪಳ್ಳಿ: ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆ ವಿರೋಧ, ಉಗ್ರ ಹೋರಾಟದ ಎಚ್ಚರಿಕೆ

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪಾರಂಪಳ್ಳಿಯಲ್ಲಿ 1.89 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿದ್ದು ಇದರಿಂದ ಈ ಭಾಗದ ರೈತರಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಲಿದೆ
ಎಂದು ಎ.7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಥಳದಲ್ಲಿ ಹಿಂದೆ ತ್ಯಾಜ್ಯ ವಿಗಂಡನೆ ಪ್ರಕ್ರೀಯೆ ಮಾನವ ಶಕ್ತಿಯ ಬಳಕೆ ಮೂಲಕ ನಡೆಸಲಾಗುತ್ತಿತ್ತು. ಆದರೆ ಇದೀಗ ಯಂತ್ರೋಪಕರಣಗಳ ಮೂಲಕ ಕಸ ವಿಗಂಡನೆ ನಡೆಸಲು
ಉದ್ದೇಶಿಸಲಾಗಿದೆ. ಈ ಘಟಕ ಸ್ಥಾಪನೆಯಾದಲ್ಲಿ ಪಕ್ಕದಲ್ಲೇ ಇರುವ ಹೊಳೆಗೆ ತ್ಯಾಜ್ಯ ನೀರು ಸೇರಲಿದ್ದು ಇದರಿಂದ ಒಳನಾಡು ಮೀನುಗಾರಿಕೆಗೆ ಸಮಸ್ಯೆಯಾಗಲಿದೆ ಹಾಗೂ ಇಲ್ಲಿನ ಸುತ್ತಮುತ್ತ ಕೃಷಿಭೂಮಿಗಳ ಕೃಷಿ ಚಟುವಟಿಕೆಗೆ ಹಾನಿಯಾಗಲಿದೆ ಎಂದರು.
ಸಿ.ಆರ್.ಝಡ್. ನಿಯಮ ಯಾಕಿಲ್ಲ?
ಸಿ.ಆರ್.ಝಡ್.ನಿಯಮದ ಪ್ರಕಾರ ಹೊಳೆ ದಂಡೆಯ 50 ಮೀಟರ್ ವ್ಯಾಪ್ತಿಯ ಒಳಗೆ ಯಾವುದೇ ಕಟ್ಟಡಗಳು ರಚನೆ ಮಾಡುವಂತಿಲ್ಲ. ಆದರೆ ಈ ಜಾಗದಲ್ಲಿ ಕಟ್ಟಡ ಹಾಗೂ ಮುಂದೆ ನಿರ್ಮಾಣವಾಗುವ ಘಟಕ ಎಲ್ಲವೂ 40ಮೀಟರ್ ಒಳಗಡೆ ಇದ್ದು ನಿಯಮವನ್ನು ಮೀರಿ ಹೇಗೆ ಅನುಮತಿ
ನೀಡಲಾಗುತ್ತಿದೆ ಎಂದು ಹೋರಾಟಗಾರರು ಪ್ರಶ್ನಿಸಿದರು. ಹಾಗೂ ಈ ಘಟಕಕ್ಕೆ ಅನುಮತಿ ನೀಡುವುದಾದರೆ ಈ ಪ್ರದೇಶದಲ್ಲಿ 50ಮೀಟರ್ನೊಳಗೆ ಎಲ್ಲ ಮನೆಗಳ ನಿರ್ಮಾಣಕ್ಕೂ ಅವಕಾಶ ನೀಡಬೇಕು ಎಂದರು ಹಾಗೂ ಪ್ರಸ್ತುತ ನಿರ್ಮಾಣಗೊಂಡಿರುವ ಗೋಡಾನ್ ಕಟ್ಟಡ ಅನಧಿಕೃತವಾಗಿದ್ದು ಇದನ್ನು ನಿರ್ಮಿಸಿದ ಮೂಲ ಮಾಲಕರಿಗೆ ನ್ಯಾಯಾಲಯ ದಂಡ ವಿದಿಸಿದೆ.
ಹಾಗಿದ್ದೂ ಅದೇ ಜಾಗದಲ್ಲಿ ಘಟಕ ಸ್ಥಾಪಿಸುವುದು ಎಷ್ಟು ಸರಿ? ಮುಂದೆ ಈ ಘಟಕದ ಬಗ್ಗೆಯೂ ಕಾನೂನು ಹೋರಾಟ ನಡೆದು ತೆರವುಗೊಳಿಸಲು ಕೋರ್ಟ್ ಆದೇಶ ನೀಡಿದರೆ ಅದರ ನಷ್ಟವನ್ನು ಯಾರು ಹೊರಲಿದ್ದಾರೆ ಎಂದು ಸ್ಥಳೀಯರಾದ ನಾಗರಾಜ್ ಗಾಣಿಗ ಸಾಲಿಗ್ರಾಮ
ಪ್ರಶ್ನಿಸಿದರು.
ವಿಲೇವಾರಿಗೆ ಮಾತ್ರ ಸಹಕಾರ:-
ಪ್ರಸ್ತುತ ಈ ಸ್ಥಳದಲ್ಲಿ ಮಾನವ ಶಕ್ತಿಯ ಮೂಲಕ ತ್ಯಾಜ್ಯ ವಿಂಗಡನೆ ನಡೆಯುತ್ತಿದೆ.
ಮುಂದೆ ಈ ಕಾರ್ಯವನ್ನು ಯಂತ್ರಗಳ ಮೂಲಕ ಮಾಡುವುದಾಗಿ ನನಗೆ ಮಾಹಿತಿ ನೀಡಿದ್ದಾರೆ
ಮತ್ತು ಸುತ್ತ ತಡೆಗೋಡೆ ನಿರ್ಮಿಸುವುದಾಗಿ ಮಾಹಿತಿ ಇದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿ ನಡೆದರೂ ನನ್ನ ವಿರೋಧವಿದ್ದು, ಗ್ರಾಮಸ್ಥರ ಹೋರಾಟಕ್ಕೆ ಸಹಕಾರ ನೀಡುತ್ತೇನೆ. ಪರಿಸರಕ್ಕೆ ಯಾವುದೇ ಸಮಸ್ಯೆ ಇಲ್ಲದ ಘಟಕವಾದರೆ ಗ್ರಾಮಸ್ಥರು ಸಹಕಾರ
ನೀಡಬೇಕು ಎಂದು ವಾರ್ಡ್ ಸದಸ್ಯೆ ಅನುಸೂಯ ಹೇರ್ಳೆ ತಿಳಿಸಿದರು.
ಸ್ಥಳೀಯ ಪರಿಸರ ಹಾಗೂ ಸ್ಥಳೀಯರಿಗೆ ಮಾರಕವಾಗಲಿರುವ ಈ ಘಟಕದ ಕಾಮಗಾರಿಯನ್ನು
ತತ್ಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಪ.ಪಂ. ಕಚೇರಿ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸ್ಥಳೀಯರಾದ ಸುರೇಂದ್ರ ಪೂಜಾರಿ, ಕೃಷ್ಣ ಪೂಜಾರಿ, ಗಣೇಶ್, ಸಂತೋಷ್, ಮಹೇಶ್ ಪೂಜಾರಿ,
ಉಮೇಶ್, ನಿತೀನ್, ಮನೋಜ್ ಪತ್ರಿಕಾಗೋಷ್ಠಿಯಲ್ಲಿದ್ದರು.