ಡೈಲಿ ವಾರ್ತೆ: 23/ಏಪ್ರಿಲ್/2025

ಉಗ್ರರ ಅಟ್ಟಹಾಸ: ಬೆಂಗಳೂರು ಟೆಕ್ಕಿ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಇಬ್ಬರು ಕನ್ನಡಿಗರು ಸೇರಿದಂತೆ 26ಕ್ಕೂ ಹೆಚ್ಚು ಪ್ರವಾಸಿಗರು ಉಗ್ರರ ದಾಳಿಗೆ ಬಲಿ!

ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ಉಗ್ರದಾಳಿಗೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಬ್ಬರು ಕನ್ನಡಿಗರು. ಶಿವಮೊಗ್ಗದ ಮಂಜುನಾಥ್ ರಾವ್ ಅವರಷ್ಟೇ ಅಲ್ಲ, ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್‌ ಕೂಡ ಉಗ್ರರ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾದ ಭರತ್ ಭೂಷಣ್ (41) ಮೃತ ವ್ಯಕ್ತಿ. ಸಾಫ್ಟ್ ವೇರ್ ಆಗಿದ್ದ ಭರತ್ ಸದ್ಯ ಡಯಾಗ್ನೋಸ್ಟಿಕ್ ಸೆಂಟರ್ ನಡೆಸುತ್ತಿದ್ದರು.

ತನ್ನ ಹೆಂಡತಿ ಸುಜಾತ ಮತ್ತು ಮಗನ ಜೊತೆಗೆ ಕಾಶ್ಮೀರಕ್ಕೆ ಹೋಗಿದ್ದರು. 3 ವರ್ಷದ ಮಗು ಮತ್ತು ಸುಜಾತ ಪ್ರಾಣಾಪಾಯದಿಂದ ಪಾರಾಗಿದ್ದು, ಅಲ್ಲಿನ ಸ್ಥಳಿಯ ಆಡಳಿತದಲ್ಲಿ ಅನಂತ್ ನಾಗ್ ಎಂಬ ಭಾಗದಲ್ಲಿ ತಂಗಲು ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದಾರೆ. ಇಂದು ಪಾರ್ಥಿವ ಶರೀರ ಕರೆತರುವ ಸಾಧ್ಯತೆ ಇದೆ.

ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡ ರಾಜ್ಯದ ತಂಡವೂ ಪಹಲ್ಗಾಮ್ ಗೆ ತೆರಳಿದ್ದಾರೆ ಎಂದು ಸರ್ಕಾರ ತಿಳಿಸಿದೆ.