



ಡೈಲಿ ವಾರ್ತೆ: 24/ಏಪ್ರಿಲ್/2025


ಪಹಲ್ಗಾಮ್ ಭಯೋತ್ಪಾದಕ ಧಾಳಿ| ಉಡುಪಿ ಜಿಲ್ಲಾ ಮುಸ್ಲಿಮ್ ಜಮಾಅತ್ ಖಂಡನೆ

ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 28 ಮಂದಿ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಘಟನೆಯು ಅಮಾನವೀಯವಾಗಿದ್ದು ಇದನ್ನು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ತೀವ್ರವಾಗಿ ಖಂಡಿಸುತ್ತದೆ.
ಧರ್ಮದ ಹೆಸರಲ್ಲಿ ಕೊಲ್ಲುವ, ಹಿಂಸೆಯನ್ನು ಪ್ರಚೋದಿಸುವ ಕೃತ್ಯ ಖಂಡನಾರ್ಹವಾಗಿದ್ದು ಅದನ್ನು ರಾಜಕೀಯಗೊಳಿಸದೆ ಧರ್ಮದ ಆಧಾರದಲ್ಲಿ ನೋಡದೆ ದೇಶದ ಮೇಲೆ ಆದಂತಹ ದಾಳಿ ಎಂದು ಪರಿಗಣಿಸಿ ಸರ್ವರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ.
ಕೇಂದ್ರ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾತ್ ಆಗ್ರಹಿಸುತ್ತದೆ.
ಅದೇ ರೀತಿ ಇಲ್ಲಿನ ಕೆಲವು ಪೀತ ಪತ್ರಿಕೆಗಳು ಹಾಗೂ ಕೋಮುವಾದಿ ಶಕ್ತಿಗಳು ಇಂತಹ ಗಂಭೀರ ಘಟನೆಯನ್ನು ಸಹ ಹಿಂದು ಮುಸ್ಲಿಂ ಮಾಡಿ ಇಲ್ಲಿನ ಸ್ವಸ್ಥ ಸಮಾಜದಲ್ಲಿ ಒಡಕನ್ನುಂಟು ಮಾಡುವ ಪ್ರಯತ್ನ ಮಾಢುತ್ತಿರುವುದು ಸಹ ಖಂಡನೀಯ ಇದನ್ನು ಸಹ ಇಲ್ಲಿನ ಸ್ವಸ್ಥ ಸಮಾಜ ಖಂಡಿಸಬೇಕಾಗಿದೆ.
ಅಲ್ಲದೆ ಮೃತರ ಕುಟುಂಬದ ಜೊತೆ ಸರಕಾರ ಹಾಗೂ ದೇಶದ ಜನರು ನಿಲ್ಲಬೇಕಾಗಿದೆ. ಸರಕಾರ ಮೃತರ ಕುಟುಂಬಗಳಿಗೆ ಗರಿಷ್ಠ ಪರಿಹಾರ ಒದಗಿಸಬೇಕಾಗಿದೆ.
ಹಾಗೂ ಜಮ್ಮು ಕಾಶ್ಮೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ನ ಜಿಲ್ಲಾಧ್ಯಕ್ಷ ಬಿಎಸ್ಎಫ್ ಮೊಹಮ್ಮದ್ ರಫೀಕ್ ಹಾಗೂ ಪ್ರದಾನ ಕಾರ್ಯದರ್ಶಿ H. ಸುಭಾನ್ ಅಹಮದ್ ಹೊನ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.