ಡೈಲಿ ವಾರ್ತೆ: 13/MAY/2025

ಅಪ್ರಾಪ್ತ ಬಾಲಕರ ನಡುವೆ ಜಗಳ: 9ನೇ ತರಗತಿಯ ಬಾಲಕನಿಗೆ ಚಾಕು ಇರಿದು ಕೊಂದ 6ನೇ ತರಗತಿಯ
ಬಾಲಕ.!

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಅಪ್ರಾಪ್ತ ಸ್ನೇಹಿತರಿಬ್ಬರ
ನಡುವೆ ಜಗಳ ಉಂಟಾಗಿ ವಿಕೋಪಕ್ಕೆ ಹೋದಾಗ ಓರ್ವನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಮೂರುಸಾವಿರ ಮಠ ಬಳಿಯ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಡಿಜೆ ಮತ್ತು ಲೈಟಿಂಗ್ ವಿಷಯಕ್ಕೆ ಸಂಬಂಧಿಸಿ ಅಪ್ರಾಪ್ತ ಸ್ನೇಹಿತರ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ ಸಿಟ್ಟಾದ 6ನೇ ತರಗತಿ ಓದುತ್ತಿದ್ದ ಬಾಲಕನು ಮನೆಯಿಂದ ಚಾಕು ತಂದವನೇ 9ನೇ ತರಗತಿಯ ಬಾಲಕನಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಕೆಎಂಸಿಆರ್‌ಐ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಕಮರಿಪೇಟೆ ಠಾಣೆ ಪೋಲೀಸರು ಭೇಟಿಕೊಟ್ಟು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಂಸಿಆರ್‌ಐ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್‌. ಶಶಿಕುಮಾ‌ರ್ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಜೀವನದಲ್ಲೇ ಇಂತಹ ಘಟನೆ ನೋಡಿಲ್ಲ. ಆರನೇ ತರಗತಿ ಬಾಲಕ ಕೊಲೆ ಮಾಡುವಂತಹ ಮನಸ್ಥಿತಿ ಬಂದಿದೆ. ಆತ ನಮ್ಮ ಸೊಂಟದೆತ್ತರಕ್ಕೂ ಇಲ್ಲ ಎಂದು ದಿಗ್ಬ್ರಮೆ ವ್ಯಕ್ತಪಡಿಸಿದರು.

ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೃತ ಬಾಲಕ 8ನೇ ತರಗತಿ ಪಾಸ್ ಆಗಿದ್ದಾನೆ. ಒಬ್ಬನೇ ಮಗ. ತಂದೆ-ತಾಯಿ ರೊಟ್ಟಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಗಾಯದ ತೀವ್ರತೆ ಅಂದಾಜಿಲ್ಲ. ಇದು ಹೃದಯ ವಿದ್ರಾವಕ ಘಟನೆ. ಕೊಲೆ ಮಾಡಿದ ಬಾಲಕನ ಕುಟುಂಬವೂ ಬಡತನದ್ದಾಗಿದೆ. ಕಾರ್ಯವಿಧಾನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.