



ಡೈಲಿ ವಾರ್ತೆ: 16/MAY/2025


ಕೊರಗರಿಗೆ ಕಳಪೆ ಮಟ್ಟದ ಪೌಷ್ಟಿಕ ಆಹಾರ : ಕೊರಗ ಸಂಘಟನೆಗಳಿಂದ ಪ್ರತಿಭಟನೆ ಎಚ್ಚರಿಕೆ

ಉಡುಪಿ: ರಾಜ್ಯದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಪ್ರಿಮಿಟಿವ್ ಟ್ರೈಬ್ ಸಮುದಾಯವಾದ ಕೊರಗರು ರಕ್ತಹೀನತೆ , ಟಿಬಿ, ಅಪೌಷ್ಟಿಕತೆ ಇತ್ಯಾದಿ ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳು, ಮತ್ತು ಕುಸಿಯುತ್ತಿರುವ ಜನಸಂಖ್ಯೆಯನ್ನು ಮನಗೊಂಡು ಸರ್ಕಾರವು ಅನೇಕ ವರುಷಗಳಿಂದ ಕೊರಗ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಪೂರೈಕೆಯನ್ನು ಮಾಡುತ್ತಿವೆ. ಆದರೆ ಇತ್ತೀಚೆಗೆ ಕಳೆದ ಎರಡು ತಿಂಗಳಿಂದ ಪೂರೈಕೆ ಯಾಗುತ್ತಿರುವ ಪೌಷ್ಟಿಕ ಆಹಾರವಾದ ತುಪ್ಪ, ಎಣ್ಣೆ, ಕಡಲೆ, ತೊಗರಿ ಬೇಳೆ, ಸಕ್ಕರೆ, ಬೆಲ್ಲ, ಹೆಸರುಕಾಳು, ತೊಗರಿ, ಅಕ್ಕಿ, ಪಾಮೋಲಿನ್ ಎಣ್ಣೆ, ಮತ್ತು ಮೊಟ್ಟೆ ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳು ತುಂಬಾ ಕಳಪೆಯಾಗಿದ್ದು ಅದನ್ನು ಸೇವಿಸಲು ಅಸಾಧ್ಯವಾಗಿದೆ ಮತ್ತು ಇದರಿಂದ ಕೊರಗರಿಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಈ ಕುರಿತು ಸಮಗ್ರ ಬುಡಕಟ್ಟು ಯೋಜನಾ ಇಲಾಖೆಗೆ ಮನವಿ ಸಲ್ಲಿಸಿದ್ದು ಕೊರಗರ ಪ್ರಮುಖ ಬೇಡಿಕೆಗೆ ಯಾವುದೇ ರೀತಿಯಿಂದಲೂ ಸ್ಪಂದಿಸುತ್ತಿಲ್ಲ.




ತದನಂತರ ಉಡುಪಿ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಿದ್ದು ಸರ್ಕಾರವು ಕೂಡಲೇ ಹಳೆಯ ಟೆಂಡರ್ ರದ್ದುಗೊಳಿಸಿ, ರೀಟೆಂಡರ್ ಕರೆದು ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಲು ಗಮನಕೊಡಬೇಕು ಹಾಗೂ ತ್ವರಿತವಾಗಿ ಕೊರಗರ ಗಂಭೀರ ಸಮಸ್ಯೆಗೆ ಸ್ಪಂದಿಸದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯೆದುರು ಕೊರಗ ಸಂಘಗಳ ಒಕ್ಕೂಟದಿಂದ ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಮತ್ತು ಸಂಯೋಜಕರಾದ ಪುತ್ರನ್ ಹೆಬ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.