ಡೈಲಿ ವಾರ್ತೆ: 23/MAY/2025

ಶಿವಮೊಗ್ಗ: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ- ತಾಯಿ, ಮಗ ಸಾವು!

ಶಿವಮೊಗ್ಗ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ತಾಯಿ-ಮಗ ಸಾವನ್ನಪ್ಪಿದ್ದು, ತಂದೆ ಹಾಗೂ ಮತ್ತೋರ್ವ ಮಗ ಗಾಯಗೊಂಡ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಸಂಭವಿಸಿದೆ.

ತರಿಕೆರೆಯಿಂದ ಸಾಗರದ ದರ್ಗಾದತ್ತ ಹೊಂಡಾ ಆ್ಯಕ್ಟಿವಾದಲ್ಲಿ ಖಲಂದರ್ ಮತ್ತು ಅವರ ಪತ್ನಿ ಅಸ್ಮಾ ಬಾನು ತಮ್ಮ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದರು. ಈ ವೇಳೆ, ಕುಂಸಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಹೋಗುತ್ತಿದ್ದಾಗ ಮಳೆ ಬಂದ ಹಿನ್ನೆಲೆಯಲ್ಲಿ ಖಲಂದರ್ ಅವರು ತಮ್ಮ ಸ್ಕೂಟಿಯನ್ನು ರಸ್ತೆ ಪಕ್ಕದ‌ಲ್ಲಿನ ಶೆಡ್​​ನತ್ತ ತಿರುಗಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಡಿಕ್ಕಿ ರಭಸಕ್ಕೆ ನಾಲ್ವರೂ ಸ್ಕೂಟರ್​ನಿಂದ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ 3 ವರ್ಷದ ಮೊಹಮ್ಮದ್ ಕಬೀರ್ ಮೇಲೆ ಬಸ್ ಹರಿದಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಖಲಂದರ್, ಪತ್ನಿ ಅಸ್ಮಾ ಬಾನು ಹಾಗೂ ಇನ್ನೋರ್ವ 6 ವರ್ಷದ ಮಗ ಗಾಯಗೊಂಡಿದ್ದರು. ತಕ್ಷಣ ಇವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದ್ದು, ಆದರೆ ಮಾರ್ಗ ಮಧ್ಯದಲ್ಲೇ ಅಸ್ಮಾ ಬಾನು ಕೊನೆಯುಸಿರೆಳೆದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಲಂದರ್ ಅವರನ್ನು‌ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.