ಡೈಲಿ ವಾರ್ತೆ: 29/MAY/2025

ಮುಸ್ಲಿಮರು ರಾಮನ ವಂಶಸ್ಥರು| ಇಸ್ಲಾಂ ಮೂಲ ಸನಾತನ ಧರ್ಮ – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಜಮಾಲ್ ಸಿದ್ದಿಕಿ

ನವದೆಹಲಿ: “ಸನಾತನ ಧರ್ಮವು ಇಸ್ಲಾಂಗಿಂತ ಮೊದಲೇ ಉದಯಿಸಿಕೊಂಡಿದ್ದು, ಅದು ನಾಗರಿಕತೆಯ ಅಡಿಪಾಯ,” ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್‌ ಸಿದ್ದಿಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಮಾಲ್ ಸಿದ್ದಿಕಿ ಸನಾತನ ಧರ್ಮವು ಬಹಳ ಹಿಂದೆಯೇ ಆರಂಭವಾಗಿದೆ. ಮುಸ್ಲಿಂ ಸಮುದಾಯದ ಮೂಲವನ್ನೂ ಹಿಂದೂ ಪರಂಪರೆಗಳಲ್ಲಿ ಹುಡುಕಬಹುದು. ಎಲ್ಲ ಮುಸ್ಲಿಮರೂ ಭಗವಾನ್‌ ರಾಮನ ವಂಶಸ್ಥರಾಗಿದ್ದಾರೆ,” ಎಂದು ಅವರು ಹೇಳಿದರು.

ತಮ್ಮ ಹೇಳಿಕೆಗೆ ಸ್ಪಷ್ಟತೆ ನೀಡಿದ ಸಿದ್ದಿಕಿ, ರಾಮ ಮತ್ತು ಕೃಷ್ಣನಲ್ಲಿ ನಂಬಿಕೆ ಇಲ್ಲದ ಮುಸ್ಲಿಮರನ್ನು ಸತ್ಯ ಮುಸ್ಲಿಮರೆಂದು ಪರಿಗಣಿಸಲಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇವರು ಇಸ್ಲಾಮಿಕ್ ಆಧ್ಯಾತ್ಮಿಕ ಪರಂಪರೆಯಲ್ಲಿ ಸ್ಥಾನ ಪಡೆದವರಾಗಿರಬಹುದೆಂದು ಅವರು ಹೇಳಿದರು.

”ಇಸ್ಲಾಂ ಧರ್ಮವು ಕೇವಲ ಒಬ್ಬ ಪ್ರವಾದಿಯನ್ನು ಮಾತ್ರವಲ್ಲ, ಅನೇಕ ಪ್ರವಾದಿಗಳನ್ನು ಒಪ್ಪಿಕೊಳ್ಳುತ್ತದೆ. ಕುರಾನ್‌ನಲ್ಲಿ 25 ಪ್ರವಾದಿಗಳ ಉಲ್ಲೇಖವಿದೆ, ಆದರೆ ಹದೀಸ್‌ಗಳ ಪ್ರಕಾರ, ದೇವರು ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಿದ್ದಾನೆ. ಅವರಲ್ಲಿ ಭಗವಾನ್ ರಾಮ ಮತ್ತು ಶ್ರೀಕೃಷ್ಣವೂ ಇರಲಿಲ್ಲ ಎಂದು ನಾವು ಹೇಗೆ ನಂಬಬಹುದು? ಅವರು ದೇವರ ಸಂದೇಶವಾಹಕರಾಗಿರಬಹುದೆಂಬ ನಂಬಿಕೆ ನನಗಿದೆ,” ಎಂದು ಸಿದ್ದಿಕಿ ವಿವರಿಸಿದರು.

”ಭಾರತದ ಮುಸ್ಲಿಂ ಸಮುದಾಯದ ಬೇರುಗಳು ಪ್ರಾಚೀನ ಹಿಂದೂ ಸಂಸ್ಕೃತಿಗೆ ನೇರವಾಗಿ ಸಂಪರ್ಕ ಹೊಂದಿವೆ. ಪೂಜಾ ವಿಧಾನಗಳು ಬದಲಾಗಿರಬಹುದು, ಆದರೆ ಸಂಸ್ಕೃತಿ ಮಾತ್ರ ಸ್ಥಿರವಾಗಿದೆ. ನಮ್ಮ ಗುರುತು ಇನ್ನೂ ಸನಾತನ,” ಎಂದು ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡರು.