



ಡೈಲಿ ವಾರ್ತೆ: 29/MAY/2025


ಹೊಸನಗರ| ಬ್ಯಾಂಕ್ ವ್ಯವಸ್ಥಾಪಕ ಹೃದಯಾಘಾತದಿಂದ ಮೃತ್ಯು!

ಹೊಸನಗರ: ಹೋಟೆಲ್ ನಲ್ಲಿ ತಿಂಡಿ ತಿಂದು ಬೈಕ್ ಏರಿ ಹೊರಟ ವ್ಯಕ್ತಿ ಹೃದಯಾಘಾತಕ್ಕೊಳಗಾಗಿ ಸಾವು ಕಂಡ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ಕೆ.ಎನ್. ರವಿಕುಮಾರ್ (45) ಎಂದು ಗುರುತಿಸಲಾಗಿದೆ. ಇವರು ತಾಲ್ಲೂಕಿನ ಕಾರಣಗಿರಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾಗಿದ್ದಾರೆ.
ಪಟ್ಟಣದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಕೆ.ಎನ್. ರವಿಕುಮಾರ್ ಅವರು ಬೆಳಿಗ್ಗೆ ಹೋಟೆಲ್ ನಲ್ಲಿ ತಿಂಡಿ ತಿಂದು ಬೈಕ್ ನಲ್ಲಿ ಹೊರಡಲು ಅಣಿಯಾಗುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಮೂಲತಃ ಚಿತ್ರದುರ್ಗದವರಾದ ಕೆ.ಎನ್. ರವಿಕುಮಾರ್ ಅವಿವಾಹಿತರಾಗಿದ್ದು ಕಳೆದ ವರ್ಷದಿಂದ ಕಾರಣಗಿರಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.