ಡೈಲಿ ವಾರ್ತೆ: 05/JUNE/2025

ಪಾಣೆಮಂಗಳೂರು| 20 ಅಡಿ ಆಳದ ನೀರಿನ ಟ್ಯಾಂಕಿಗೆ ಹಾರಿ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಆತ್ಮಹತ್ಯೆ!

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಬಳಿ ಬೈಕ್‌, ಮೊಬೈಲ್, ಚಪ್ಪಲಿ ಹಾಗೂ ಅಂಗಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆಯಾಗಿದೆ.

ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್ ಅಂಗಿ ಮೊಬೈಲ್ ಮತ್ತು ಚಪ್ಪಲಿ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅರುಣ್ ಪುತ್ತಿಲ ಅವರ ಕೋರಿಕೆ ಮೇರೆಗೆ ಸಂಜೀವ ಪೂಜಾರಿ ಅವರ ಆಪ್ತರಾದ ಸಮಾಜ ಸೇವಕ ಪವರ್ ಇಕ್ಬಾಲ್ ನಂದಾವರ ಅವರು ಕಾರ್ಯಾಚರಣೆ ಇಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ ನೇತ್ರಾವತಿ ನದಿಯ ಬದಿಯಲ್ಲಿರುವ 20 ಅಡಿ ಆಳದ ನೀರಿನ ಟ್ಯಾಂಕಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ನೀರಿನ ಟ್ಯಾಂಕಿಯಿಂದ ಮೇಲೇತ್ತುವಲ್ಲಿ ಸಹಕರಿಸಿದ ಪವರ್ ಇಕ್ಬಾಲ್ ನಂದಾವರ ಹಾಗೂ ಅಲ್ಲಿಯ ಸ್ಥಳೀಯ ಮುಸ್ಲಿಂ ಯುವಕರ ಸೌಹಾರ್ದತೆಯ ಸಹಕಾರ ಶ್ಲಾಘನೀಯವಾಗಿದೆ.

ಅರುಣ್ ಪುತ್ತಿಲ ಅವರ ಆಪ್ತರಾದ ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ಇವರು ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಅವರ ಮಿತ್ರರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕುಟುಂಬವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.