ಡೈಲಿ ವಾರ್ತೆ: 08/JUNE/2025

ಬೆಂಗಳೂರು ಕಾಲ್ತುಳಿತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಭೂಮಿಕ್‌ ಸಾವು: ಮಗನ ಸಮಾಧಿ ಬಳಿ ತಂದೆ ಆಕ್ರಂದನ

ಹಾಸನ: ಈ ರೀತಿ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು..!. ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು,, ಇದೇ ಜಾಗದಲ್ಲಿ ನನ್ನ ಮಗ ಮಲಗುತ್ತಿದ್ದ. ಈಗ ಇಲ್ಲೇ ಮಲಗಿಸಿದ್ದೇನೆ.. ಯಾರಿಗೂ ಈ ಪರಿಸ್ಥಿತಿ ಬೇಡ ಎಂದು ತಂದೆ ಗೋಳಾಡಿದ್ದಾರೆ.

ಹೌದು, ಈ ಘಟನೆ ನಡೆದು ಮೂರು ದಿನ ಕಳೆದಿದೆ. ಆದರೆ ಹೆತ್ತವರ ಆಕ್ರಂದನ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಗನ ನೆನೆದು ಗೋಳಿಡುತ್ತಿರುವ ದೃಶ್ಯ ಮನಕಲಕುವಂತಿದೆ.

ಯಾರಿವರು ?: ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ಈ ದುರಂತ ಸಂಭವಿಸಿತ್ತು. 11ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿದ್ದು ಅಭಿಮಾನಿಗಳ ಮನೆಗಳಲ್ಲಿ ಸೂತಕ ಛಾಯೇ ಕಾಣುತ್ತಿದೆ.

ಮೃತ ಎಂಜಿನಿಯರಿಂಗ್‌ ವಿದ್ಯಾರ್ಥಿ ಭೂಮಿಕ್​ ನ ಮೂರನೇ ದಿನದ ಹಾಲು ತುಪ್ಪದ ಕಾರ್ಯವಿದ್ದ ಹಿನ್ನೆಲೆ ತಂದೆ‌ ಡಿ.ಟಿ ಲಕ್ಷ್ಮಣ್‌, ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಮಗನ ಸಮಾಧಿ ಮೇಲೆ ಮಲಗಿ ಗೋಳಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದ್ದು, ಮೃತನ ತಂದೆಯ ಆಕ್ರಂದನ ಮುಗಿಲು ಮಟ್ಟಿದೆ.