ಡೈಲಿ ವಾರ್ತೆ: 12/JUNE/2025

ಲೇಡಿ ಕಾನ್‌ಸ್ಟೇಬಲ್​ಗೆ ಹಲ್ಲೆ ಆರೋಪ: ಹೆಡ್‌ಕಾನ್‌ಸ್ಟೇಬಲ್​ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಉಪ್ಪಾರಪೇಟೆ ಪೊಲೀಸ್​ ಠಾಣೆಯ ಕರ್ತವ್ಯನಿರತ ಇಬ್ಬರು ಸಿಬ್ಬಂದಿ ನಡುವೆ ಗಲಾಟೆ ನಡೆದಿದ್ದು, ಅದೇ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್​ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಾನ್‌ಸ್ಟೇಬಲ್ ರೇಣುಕಾ ಅವರು ನೀಡಿದ ದೂರಿನ ಮೇರೆಗೆ ಹೆಡ್​ ಕಾನ್‌ಸ್ಟೇಬಲ್​ ಬಿ.ಜಿ. ಗೋವಿಂದರಾಜು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂನ್​ 10ರಂದು ರಾತ್ರಿ ಕಂಪ್ಯೂಟರ್​​ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವಂತೆ, ಊಟ ನೀಡುವಂತೆ ಠಾಣೆಯ ಎಎಸ್‌ಐ ತಿಮ್ಮೇಗೌಡ ಸೂಚಿಸಿದ್ದರು.

ತಡರಾತ್ರಿ 2.30ರ ಸುಮಾರಿಗೆ ಆ ಮಕ್ಕಳನ್ನು ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸುತ್ತಿದ್ದೆ. ಅದೇ ಸಮಯದಲ್ಲಿ ಪ್ರವೇಶ ದ್ವಾರದ ರಿಸಪ್ಶನ್ ಟೇಬಲ್ ಮೇಲೆ ಕುಳಿತಿದ್ದ ಹೆಡ್‌ಕಾನ್‌ಸ್ಟೇಬಲ್ ಬಿ.ಜಿ. ಗೋವಿಂದರಾಜು, ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಂಡ ಹೆಣ್ಣು ಮಕ್ಕಳು, ನನಗೆ ಮಾಹಿತಿ ನೀಡಿದ್ದರು. ಆಗ ಯಾಕೆ ಸರ್ ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀರಿ? ಇಲ್ಲಿ ಚಿಕ್ಕ ಮಕ್ಕಳು ಇದ್ದಾರೆ ಎಂದು ಪ್ರಶ್ನಿಸಿದ್ದೆ. ಆಗ ಗೋವಿಂದರಾಜು, ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಶೂ ಧರಿಸಿದ್ದ ಕಾಲಿನಿಂದ 3-4 ಬಾರಿ ಒದ್ದಿದ್ದಾರೆ. ಆಗ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ತಿಮ್ಮೇಗೌಡ, ಕಾನ್‌ಸ್ಟೇಬಲ್‌ಗಳಾದ ಬಸಪ್ಪ, ಮಹೇಶ್ ಅವರು ಬಿಡಿಸಲು ಬಂದಿದ್ದರು. ಆಗಲೂ ನಿಂದಿಸಿ ಒದ್ದಿದ್ದಾರೆ ಎಂದು ರೇಣುಕಾ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.