



ಡೈಲಿ ವಾರ್ತೆ: 12/JUNE/2025


ಬಿಜೆಪಿ ಯುವ ಮೋರ್ಚಾ ನಾಯಕನಿಂದ ವಿದ್ಯಾರ್ಥಿನಿಗೆ ಕಿರುಕುಳ: ನಾಯಕನ ರಕ್ಷಣೆಗೆ ಬಿಜೆಪಿಗರು ಮುಂದಾದರೆ ಉಗ್ರ ಪ್ರತಿಭಟನೆ – ಕಾರ್ಕಳ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹವಾಲ್ದಾರ್

ಕಾರ್ಕಳ: ಹೆಬ್ರಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಯೊಂದರಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಪಕ್ಷ ಬಿಜೆಪಿಯ ವಿಧಾನಸಭಾ ಕ್ಷೇತ್ರದ ಉನ್ನತ ಜವಾಬ್ದಾರಿಯಲ್ಲಿರುವ ವ್ಯಕ್ತಿಯೋರ್ವ ತನ್ನದೇ ವಿದ್ಯಾ ಸಂಸ್ಥೆಯಲ್ಲಿನ ವಿದ್ಯಾರ್ಥಿನಿಗೆ ಫೋನ್ ಕಾಲ್ ನಲ್ಲಿ ನಿರ್ಜನ ಪ್ರದೇಶಕ್ಕೆ ತುಂಬಾ ಬಲವಂತವಾಗಿ ತನ್ನ ಕಾರ್ ನಲ್ಲಿ ಬರಲು ಆಹ್ವಾನಿಸುತ್ತಿರುವ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾರ್ಕಳದಾದ್ಯಂತ ಸಾರ್ವಜನಿಕರಿಗೆ ಹಾಗೂ ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಮಕ್ಕಳ ಪೋಷಕರೆಲ್ಲರಿಗೂ ತಮ್ಮ ಮಕ್ಕಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಇಂತಹ ಅಧ್ಯಾಪಕನಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ತಾನು ಕೆಲಸ ಮಾಡುತ್ತಿರುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳನ್ನು ಈ ರೀತಿ ಪೀಡಿಸುತ್ತಿರುವುದು ಯಾವ ರೀತಿಯ ಜಿಹಾದ್ ಅಥವಾ ಯಾವ ರೀತಿಯ ಧರ್ಮರಕ್ಷಣೆ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕಾಗಿದೆ.
ಈ ಹಿಂದೆ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಇಂತಹದ್ದೆ ಪ್ರಕರಣಕ್ಕಾಗಿ ಇತನನ್ನು ಆ ವಿದ್ಯಾ ಸಂಸ್ಥೆಯು ಹೊರದಬ್ಬಿದ್ದರೂ, ಅದಾಗಿ ಸ್ವಲ್ಪ ಸಮಯದಲ್ಲೇ ಇಂತಹ ಪರಮ ಸ್ತ್ರೀ ಪೀಡಕನಿಗೆ ಕರೆದು ಪಕ್ಷದ ಉನ್ನತ ಸ್ಥಾನ ಕೊಟ್ಟ ಶಾಸಕರು ಮತ್ತು ಅವರ ಪಕ್ಷ ಈ ವ್ಯಕ್ತಿಯ ಕುರಿತು ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕಾಗಿದೆ. ಈ ಫೋನ್ ಕಾಲ್ ನಲ್ಲಿ ಮಾತನಾಡಿರುವ ಆರೋಪ ಹೊತ್ತಿರುವ ವ್ಯಕ್ತಿಯನ್ನು ಪರೋಕ್ಷವಾಗಿ ಬಿಜೆಪಿಗರು ರಕ್ಷಿಸಲು ಮುಂದಾದದ್ದು ಪ್ರಜ್ಞಾವಂತ ನಾಗರಿಕರ ಪಾಲಿನ ದುರಂತ ಎಂದರೆ ಖಂಡಿತ ತಪ್ಪಾಗಲಾರದು. ಬಿಜೆಪಿ ಪಕ್ಷಕ್ಕೆ ಹಾಗೂ ಕಾರ್ಕಳ ಶಾಸಕರಿಗೆ ನೈತಿಕತೆ ಇದ್ದಲ್ಲಿ ಈ ಕೂಡಲೇ ಆತನನ್ನು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಬೇಕು . ಒಂದು ವೇಳೆ ಈ ಕೂಡಲೇ ಆತನನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡದೇ ಇದ್ದಲ್ಲಿ ಇಂತಹ ಕಾಮುಕರಿಗೆ ರಕ್ಷಣೆ ನೀಡಿದಂತಾಗುತ್ತದೆ.
ಹಾಗಾಗಿ ಈ ಕೂಡಲೇ ಬಿಜೆಪಿಯು ಈತನನ್ನು ಉಚ್ಚಾಟನೆ ಮಾಡದೇ ಇದ್ದಲ್ಲಿ ಕಾರ್ಕಳ ಬಿಜೆಪಿ ಕಚೇರಿ ಹಾಗೂ ಶಾಸಕ ಸುನಿಲ್ ಕುಮಾರ್ ರವರ ಕಚೇರಿ ಎದುರುಗಡೆ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ ಹವಾಲ್ದಾರ್ ಬೆಟ್ಟು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.