



ಡೈಲಿ ವಾರ್ತೆ: 13/JUNE/2025


ಬಂಟ್ವಾಳ: ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಅಪರಿಚಿತರಿಂದ ತಲವಾರು ಬೀಸಿ ಹಲ್ಲೆಗೆ ಯತ್ನ – ದೂರು ದಾಖಲು

ಬಂಟ್ವಾಳ : ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ತಲವಾರು ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಬುಧವಾರ ಮುಂಜಾನೆ ವೇಳೆ ನಡೆದಿದ್ದು, ಶುಕ್ರವಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಫಾರೂಕ್ (48) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜೂನ್ 11 ರಂದು ಮುಂಜಾನೆ ಮನೆಯಿಂದ ಜೀಪಿನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದ ವೇಳೆ ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ರಸ್ತೆಯ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಬೈಕಿನ ಹಿಂಬದಿ ಸವಾರನಾಗಿದ್ದ ವ್ಯಕ್ತಿಯು ತಲವಾರು ಬೀಸಿರುತ್ತಾನೆ. ಈ ವೇಳೆ ತಲವಾರು ತಾಗಿ ಉಮರ್ ಫಾರೂಕ್ ಅವರ ಜೀಪಿನ ಸೈಡ್ ಮಿರರ್ ನ ಗಾಜು ಒಡೆದಿರುತ್ತದೆ.
ಉಮರ್ ಫಾರೂಕ್ ಅವರು ಈ ಬಗ್ಗೆ ಶುಕ್ರವಾರ ಠಾಣೆಗೆ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2025 ಕಲಂ 109, 324(4), ಜೊತೆಗೆ 3(5)
ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.