ಡೈಲಿ ವಾರ್ತೆ: 15/JUNE/2025

ಶೂಟಿಂಗ್ ವೇಳೆ ದೋಣಿ ಮುಗುಚಿ ಪಾರಾದ ಕಾಂತಾರ ಚಾಪ್ಟರ್-1 ಚಿತ್ರ ತಂಡದ ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚು ಕಲಾವಿದರು!
ಈ ಕುರಿತು ಒಂದು ವರದಿ ಇಲ್ಲಿದೆ.

ತೀರ್ಥಹಳ್ಳಿ: ನಟ ನಿರ್ದೇಶಕ ನಿರ್ಮಾಪಕ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್-1 ಚಿತ್ರದ ಚಿತ್ರೀಕರಣ ಶಿವಮೊಗ್ಗದ ಹೊಸನಗರದ ಮಾಣಿ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದೆ. ಆದ್ರೆ, ಈ ವೇಳೆ ದೊಡ್ಡ ಅವಘಡವೊಂದು ಸಂಭವಿಸಿದ್ದು, ಅದೃಷ್ಟವಶಾತ್ ರಿಷಬ್ ಶೆಟ್ಟಿ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರು ಬಚಾವ್ ಆಗಿದ್ದಾರೆ. ಜೂನ್ 14ರ ಸಂಜೆ ಶೂಟಿಂಗ್ ವೇಳೆಯಲ್ಲಿ ದೋಣಿ ಮುಗುಚಿದ ಪರಿಣಾಮ 30ಕ್ಕೂ ಹೆಚ್ಚು ಕಲಾವಿದರು ಇರುವ ನೀರು ಪಾಲಾಗಿದ್ದರು. ಸ್ಥಳೀಯ ಮಾಹಿತಿಯಂತೆ ರಿಷಬ್ ಶೆಟ್ಟಿ ಸೇರಿ ಎಲ್ಲ ಕಲಾವಿದರು ಈಜುಕೊಂಡು ದಡ ಸೇರಿದ್ದಾರೆ. ಕೆಲವರನ್ನು ಚಿತ್ರತಂಡದ ಇತರರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಎಲ್ಲರೂ ಸೇಫ್ ಆಗಿ ಹೊಸನಗರದ ಯಡೂರು ರೆಸಾರ್ಟ್ ಗೆ ವಾಪಸ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಹೀಗೆ ದೊಡ್ಡ ದುರಂತ ನಡೆಯಿತು ಎನ್ನುವ ವಂದತಿಯು ಸದ್ಯ ಮಲೆನಾಡಿನೆಲ್ಲಡೆ ಹಬ್ಬಿಕೊಂಡಿದೆ. ಈ ನಡುವೆ ಘಟನೆ ಕುರಿತು ಶಿವಮೊಗ್ಗ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆಯು ನಡೆದಿದೆ. ಸದ್ಯ ಶೂಟಿಂಗ್ ವೇಳೆ ಏನೆಲ್ಲಾ ನಡೆಯಿತು ಮತ್ತು ಯಾರಿಗೆಲ್ಲ ಸಮಸ್ಯೆ ಆಗಿದೆ ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲದಂತಾಗಿದೆ. ಚಿತ್ರ ತಂಡವೂ ಸಹ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ.

ಇದನ್ನೂ ಓದಿ: ’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ
ಚಿತ್ರತಂಡದ ಮ್ಯಾನೇಜರ್ ಸೇರಿದಂತೆ ಯಾರೂ ಕೂಡಾ ಈ ಘಟನೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಒಂದು ಮೂಲಗಳ ಪ್ರಕಾರ ಘಟನೆಯಲ್ಲಿ ಒಂದಿಷ್ಟು ಕಲಾವಿದರು ಅಸ್ವಸ್ಥಗೊಂಡಿದ್ದರು. ಅವರನ್ನು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಯ ವೈದ್ಯರು ಯಾವುದನ್ನು ಖಚಿತ ಪಡಿಸುತ್ತಿಲ್ಲ. ಒಟ್ಟಾರೆ ಕಾಂತಾರ ಚಾಪ್ಟರ್ 1ರ ಜೂ.14 ಮತ್ತು ಜೂ.11 ರಂದು ನಡೆದ ಘಟನೆಗಳು ರಹಸ್ಯದಿಂದ ಕೂಡಿವೆ.

ಜೂನ್ 11ರ ರಾತ್ರಿ ತೀರ್ಥಹಳ್ಳಿಯ ಆಗುಂಬೆಯ ಹೋಂ ಸ್ಟೇನಲ್ಲಿದ್ದ ಕಾಂತಾರ ಚಾಪ್ಟರ್ 1 ಚಿತ್ರದ ಕಲಾವಿದ ವಿಜು ವಿಕೆ. ಹೃದಯಘಾತದಿಂದ ಮೃತಪಟ್ಟಿದ್ದ. ವಿಜು ವಿ.ಕೆ. ಕೇರಳದ ತ್ರಿಶೂರ್ ಮೂಲದವರು. ವಯಸ್ಸು 50 ಆಗಿತ್ತು. ಮದುವೆ ಆಗಿ ಎರಡು ಮಕ್ಕಳಿದ್ದಾರೆ. ಜೂನ್ 11ರ ರಾತ್ರಿ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ಗಾಗಿ ಮಿಮಿಕ್ರಿ ಕಲಾವಿದ ವಿಜು ತೀರ್ಥಹಳ್ಳಿ ಪಟ್ಟಣಕ್ಕೆ ಬಂದಿದ್ದರು. ಬೆಳಗ್ಗೆ ಕಾಂತರ ಶೂಟಿಂಗ್ ಟೈಂ ಫೀಕ್ಸ್ ಆಗಿತ್ತು. ಒಟ್ಟು 20 ಕಲಾವಿದರು ಆಗುಂಬೆಯ ಹೋಂ ಸ್ಟೇ ನಲ್ಲಿ ತಂಗಿದ್ದರು. ಜೂ 11ರ ರಾತ್ರಿ 10 ಘಂಟೆಯ ಆಸುಪಾಸಿನಲ್ಲಿ ವಿಜುಗೆ ಎದೆನೋವು ಕಾಣಿಸಿಕೊಂಡಿದೆ. ಸಹ ಕಲಾವಿದರು ಮತ್ತು ಸ್ಥಳೀಯರು ಸೇರಿ ವಿಜುನನ್ನು ಅಂಬುಲೇನ್ಸ್ ಮೂಲಕ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ನಡುವೆ ದಾರಿ ಮಧ್ಯೆದಲ್ಲೇ ವಿಜು ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಕರೆತಂದ ಬಳಿಕ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಆಗಲೇ ಆತನ ಜೀವ ಹೋಗಿತ್ತಂತೆ. ಇಂದಿನ ಶೂಟಿಂಗ್ ನಲ್ಲಿ ಭಾಗವಹಿಸಬೇಕಿದ್ದ ಮಿಮಿಕ್ರೆ ಕಲಾವಿದ ವಿಜು ಸಾವಿನ ಮನೆ ಸೇರಿದ್ದ ಎಲ್ಲರಿಗೂ ದೊಡ್ಡ ಆಘಾತ ತಂದಿತ್ತು. ಈಗಾಗಲೇ ಕಾಂತಾರ ಚಾಪ್ಟರ್ ಶೂಟಿಂಗ್ ಆರಂಭದಿಂದಲೂ ನೂರೆಂಟು ಸಮಸ್ಯೆ ವಿಘ್ನಗಳು ಶುರುವಾಗಿವೆ. ಕರಾವಳಿಯ ದೈವದ ಕುರಿತು ಇರುವ ಚಿತ್ರ ಇದಾಗಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿವೆ ಎನ್ನುವ ಮಾತುಗಳ ಸಹ ಕೇಳಿಬರುತ್ತಿವೆ.

ಈ ಹಿಂದೆ ಇಬ್ಬರು ಶೂಟಿಂಗ್ ಬಳಿಕ ಮೃತಪಟ್ಟಿದ್ದರು. ಈಗ ಮೂರನೇ ವ್ಯಕ್ತಿಯು ಶೂಟಿಂಗ್ ಸಮಯದಲ್ಲಿ ಮೃತಪಟ್ಟಿದ್ದಾನೆ. ಸದ್ಯ ಸಹಕಲಾವಿದ ವಿಜು ಶೂಟಿಂಗ್ ಆರಂಭದ ಮೊದಲೇ ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಕಾಂತಾರಾ ಚಾಪ್ಟರ್ ಶೂಟಿಂಗ್ ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಕಾಂತಾರ ಚಿತ್ರ ತಂಡವು ಮಲೆನಾಡಿನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.

ದೋಣಿ ಮುಗುಚಿದ ಬಳಿಕ ಏನೆಲ್ಲಾ ಅನಾಹುತ ನಡೆಯಿತು ಎನ್ನುವುದನ್ನು ಚಿತ್ರತಂಡವು ಗೌಪ್ಯವಾಗಿ ಇಟ್ಟಿದೆ. ಚಿತ್ರ ತಂಡದ ಯಾವುದೇ ಸಿಬ್ಬಂದಿ ಮತ್ತು ಸಹ ಕಲಾವಿದರಿಗೆ ಘಟನೆ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.ಈ ಹಿನ್ನಲೆಯಲ್ಲಿ ದುರಂತ ನಡೆದಿರುವುದು ಮಾತ್ರ ಬಹಿರಂಗವಾಗಿದೆ.