ಡೈಲಿ ವಾರ್ತೆ: 18/JUNE/2025

ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ!

ರಾಯಚೂರು: ಕನ್ನಡದ ಬಿಗ್‌ಬಾಸ್‌ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ:
ಮಾನ್ವಿ ಪಟ್ಟಣದ ಮೈನುದ್ದಿನ್, ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟಅಪ್ ಮಾಡಿಕೊಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ 4 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂ. ಹಣ ವಾಪಸ್‌ ಪಡೆಯಲಾಗಿತ್ತು. ಆ ನಂತರ ಸುರೇಶ್ ನನ್ನ ಮತ್ತು ಸ್ನೇಹಿತನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ.

ಬಿಗ್‌ಬಾಸ್‌ ಬಳಿಕ ಸುರೇಶ್‌ನನ್ನ ಮೈನುದ್ದಿನ್ ಪತ್ತೆ ಹಚ್ಚಿದ್ದ, ಅದಾದಮೇಲೆ ಮೈನುದ್ದೀನ್‌ ಸ್ನೇಹಿತ ಬಸವರಾಜ್‌ಗೆ ಸುರೇಶ್‌ 50 ಸಾವಿರ ರೂ. ಹಣ ಹಾಕಿದ್ದ. ಆಗಾಗ್ಗೆ ಅಲ್ಪಸ್ವಲ್ಪ ಹಣ ಕೊಟ್ಟಿದ್ದಾರೆ, ಉಳಿದ 4 ಲಕ್ಷ ಹಣ ಕೊಡಿ ಅಂತ ಕೇಳ್ತಿದ್ದೀವಿ. ಕೆಲ ದಿನಗಳ ಹಿಂದೆಯೂ ಮುಂಬೈಗೆ ಬನ್ನಿ ಕೊಡ್ತಿನಿ ಅಂತ ಗೋಲ್ಡ್ ಸುರೇಶ್ ಮುಂಬೈ ಲೊಕೇಶನ್ ಹಾಕಿದ್ದರು ಎಂದು ದೂರಿದ್ದಾರೆ.

ಕಾನೂನು ಹೋರಾಟ ಮಾಡ್ತೀನಿ: ಗೋಲ್ಡ್‌ ಸುರೇಶ್‌
ಇನ್ನೂ ಮೈನುದ್ದೀನ್‌ ಆರೋಪ ತಳ್ಳಿಹಾಕಿರುವ ಗೋಲ್ಡ್‌ ಸುರೇಶ್‌, 2017ರಲ್ಲೇ ಕೇಬಲ್ ಚಾನಲ್ ಮಾಡಿಕೊಟ್ಟಿದ್ದೀನಿ, ಈಗ ಯಾಕೆ ಆರೋಪ ಮಾಡ್ತಿದಾರೆ ಗೊತ್ತಿಲ್ಲ? ಅವರು ಕೇಬಲ್ ಚಾನೆಲ್‌ರನ್ನ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆ ವ್ಯವಹಾರ ಸರಿಯಾಗಿ ಮಾಡದ ಹಿನ್ನೆಲೆ ಅವರಿಗೆ ಬಾಕಿ ಹಣ ಮರಳಿಸಿದ್ದೇನೆ. 2017ರ ಬಳಿಕ ನಾನು ಮೈನುದ್ದಿನ್‌ನ ಭೇಟಿಯಾಗಿಲ್ಲ. ಬಿಗ್‌ಬಾಸ್ ಮುಗಿದು ಎಷ್ಟು ದಿನ ಆಯ್ತು? ಈಗ ನನ್ನ ಮೇಲೆ ಆರೋಪ ಮಾಡ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ.

ನಾವು 1 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ವಿ ಅದು ಮುಗಿದೇ ಹೋಗಿದೆ. ರಾಯಚೂರಿನ ಬಸವರಾಜ್ ಎನ್ನುವವರ ಮೂಲಕ ಪರಿಚಯ ಆಗಿದ್ದ. ಬೇರೆಯವರು ನಡೆಸುತ್ತಿದ್ದ ಚಾನಲ್ ಇವರಿಗೆ ಕೊಡಿಸಿದ್ದೆವು. ಆ ಚಾನಲ್ ಸಹ ಬೇರೆಯವರ ಹೆಸರಿನಲ್ಲಿದೆ. ಅವರು ಸಹ ಈಗ ಮುಂದೆ ಬರ್ತಾರೆ. ನಮ್ಮದು 6 ವರೆ ಲಕ್ಷದ ವ್ಯವಹಾರ, ಹಣಕ್ಕೆ ತಕ್ಕಂತೆ ಸ್ಟೂಡಿಯೋ ಎಲ್ಲಾ ಸೆಟ್ ಮಾಡಿಕೊಟ್ಟಿದ್ದೇನೆ. ಸುಮ್ಮನೆ ಆರೋಪ ಮಾಡುತ್ತಿರುವುದರಿಂದ ನಾನು ಕಾನೂನು ಮೊರೆ ಹೋಗ್ತಿನಿ, ಹೋರಾಟ ಮಾಡ್ತಿನಿ ಎಂದು ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.