



ಡೈಲಿ ವಾರ್ತೆ: 19/JUNE/2025


ರಾಜ್ಯದಲ್ಲಿ ಇಂದಿನಿಂದ ತಗ್ಗಿದ ಮಳೆ ಪ್ರಮಾಣ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದಲೂ ಮಳೆ ಇಳಿಕೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿಯಾದ್ಯಂತ ಬುಧವಾರ ಮಳೆ ಕ್ಷೀಣಗೊಂಡಿದ್ದು, ಬಿಸಿಲು ಹಾಗೂ ಮೋಡ ಕವಿದ ವಾತಾವರಣವಿತ್ತು. ಹಲವೆಡೆ ಆಗಾಗ ಸಾಧಾರಣ ಮಳೆ ಸುರಿದಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ 3 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮಳೆ ಜೋರಾಗಿತ್ತು. ಆದರೆ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಪ್ರಬಲಕ್ಕೆ ಪೂರಕ ವಾತಾವರಣ ಇಲ್ಲದ ಕಾರಣ ಇಂದಿನಿಂದ ಆ ಭಾಗಗಳಲ್ಲಿ ಮಳೆ ಇನ್ನಷ್ಟು ಕ್ಷೀಣವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಈ ವೇಳೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಗಿಂತ ಗಾಳಿಯ ವೇಗವೇ ಹೆಚ್ಚಳವಾಗುತ್ತಿದೆ.
ಬೆಳಗಾವಿ, ಧಾರವಾಡ, ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಜೂನ್ 25ರ ವರೆಗೆ ಸಾಧಾರಣ ಮಳೆ ಮುಂದುವರೆಯಲಿದೆ.
ಭಾಗಮಂಡಲ, ಕಾರ್ಕಳ, ಬೆಳ್ತಂಗಡಿ, ಲೋಂಡಾ, ಧರ್ಮಸ್ಥಳ, ಕಾರ್ಕಳ, ಕಳಸ, ಸುಳ್ಯ, ಕಮ್ಮರಡಿ, ಶೃಂಗೇರಿ, ಉಪ್ಪಿನಂಗಡಿ, ಮೂಡುಬಿದಿರೆ, ನಾಪೋಕ್ಲು, ಸಿದ್ದಾಪುರ, ಪುತ್ತೂರು, ಗೇರುಸೊಪ್ಪ, ಮುಲ್ಕಿ, ಸೋಮವಾರಪೇಟೆ, ಅಂಕೋಲಾ, ಯಲ್ಲಾಪುರ, ಕುಮಟಾ, ಹಾರಂಗಿ, ಮಂಕಿ, ತರಿಕೆರೆ, ಅರಕಲಗೂಡು, ಹೊನ್ನಾಳಿ, ಶಿವಮೊಗ್ಗ, ಹಾವೇರಿ, ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ.