



ಡೈಲಿ ವಾರ್ತೆ: 20/JUNE/2025


ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬೋಟ್ ವಶಕ್ಕೆ: ನೌಕಾದಳದಿಂದ ಆರು ಮೀನುಗಾರರ ಬಂಧನ!

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಲೆಯ ಅಬ್ಬರಕ್ಕೆ ನೌಕಾದಳದ ವ್ಯಾಪ್ತಿ ಪ್ರದೇಶಕ್ಕೆ ಹೋಗಿದ್ದು, ನೌಕಾದಳದವರು ಎರಡು ಬೋಟುಗಳನ್ನು ವಶಕ್ಕೆ ಪಡೆದು ಆರು ಜನ ಮೀನುಗಾರರನ್ನು ಬಂಧಿಸಿದ್ದಾರೆ.
ಕಾರವಾರದ ಅರಗಾ ಬಳಿಯ ಸಮುದ್ರ ಭಾಗದಲ್ಲಿ ಘಟನೆ ನಡೆದಿದೆ. ಕಾರವಾರದ ಬೈತಕೋಲಿನ ರವಿ ನಾರಾಯಣ್ ಹರಿಕಾಂತ್ ಎಂಬವರಿಗೆ ಸೇರಿದ ಅರ್ಯಪರಮ್ ಎಂಬ ಬೋಟ್ ಹಾಗೂ ರಾಜು ವಾಮಂತ್ ತಾಂಡೇಲ್ ಎಂಬವರಿಗೆ ಸೇರಿದ ಓಂ ಶ್ರೀ ಆರ್ಯದುರ್ಗ ಎಂಬ ಹೆಸರಿನ ಬೋಟನ್ನು ನೌಕಾದಳದವರು ವಶಕ್ಕೆ ಪಡೆದಿದ್ದು, ಆರು ಜನ ಮೀನುಗಾರರನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ತಮ್ಮ ಬೋಟುಗಳು ಅಲೆಗಳ ಅಬ್ಬರಕ್ಕೆ ತೇಲೆ ನೌಕಾದಳದ ಸುಪರ್ಧಿಗೆ ಹೋಗಿದೆ. ಇದೀಗ ಬೋಟುಗಳು ಹಾಗೂ ಲಕ್ಷಾಂತರ ಮೌಲ್ಯದ ಬಲೆಗಳನ್ನು ನೌಕಾದಳದ ಅಧಿಕಾರಿಗಳು ವಶದಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದ್ದು, ಬೋಟುಗಳನ್ನು ಹಾಗೂ ಬಂಧಿಸಿದ ಮೀನುಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.