



ಡೈಲಿ ವಾರ್ತೆ: 20/JUNE/2025


ನರೇಗಾದಲ್ಲಿ ಭಾರೀ ಗೋಲ್ಮಾಲ್ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಿಲ್ ಪಡೆಯಲು ಯುವಕನೊಬ್ಬ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿ ಅಕ್ರಮ ಎಸಗಿರುವ ಘಟನೆ ಹುನಗುಂದ ಹಾಗೂ ಇಳಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನೋರ್ವ ಬಿಲ್ ಪಡೆಯಲು ಸೀರೆ ಉಟ್ಟು ಫೋಟೋಗೆ ಫೋಸ್ ನೀಡಿ ವೆಬ್ಸೈಟ್ಗೆ ಅಪ್ಲೋಡ್ ಮಾಡಿಸಿದ್ದಾನೆ. ಇಳಕಲ್ ತಾಲ್ಲೂಕಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿದ್ದನಕೊಳ್ಳ ಗ್ರಾಮದಲ್ಲಿ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಮಂಗಳಮ್ಮ ಆರಿ ಹೆಸರಲ್ಲಿ ಯುವಕ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾನೆ.
ಪಂಚಾಯತ್ ರಾಜ್ ಹಾಗೂ ಗ್ರಾಮ ಪಂಚಾಯತ್ಗಳಿಂದ ನಿಯಮ ಮೀರಿದ ಕಾಮಗಾರಿ ಮಾಡಲಾಗಿದ್ದು, ಬಿಲ್ಪಾಸ್ ಮಾಡಿಕೊಳ್ಳಲು ಈ ರೀತಿಯ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ಮಾಡಿ ಯುವಕ ಈಗ ಸುದ್ದಿಯಾಗಿದ್ದಾನೆ.
ಅಧಿಕಾರಿಗಳು ಅಂಗನವಾಡಿ ಕಟ್ಟಡಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಕೆ ಮಾಡಿದ್ದಾರೆ. ಹುನಗುಂದ ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಡೆದಿರುವ ಅಕ್ರಮ ಇದಾಗಿದ್ದು ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಗಂಭೀರ ಆರೋಪ ಬಂದಿದೆ.
ಕೂಲಿಕಾರ್ಮಿಕರ ಒಂದೇ ಫೋಟೋ ಎರಡೆರಡು ಗ್ರಾಮ ಪಂಚಾಯತ್ಗಳಲ್ಲಿ ಬಳಕೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಗಂಜಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿ ಅಂಗನವಾಡಿ ಕಟ್ಟಡ ಮತ್ತು ಬಿಂಜವಾಡಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಟ್ಟಡಕ್ಕೆ ಕೂಲಿ ಕಾರ್ಮಿಕರ ಒಂದೇ ಫೋಟೋ ಅಪ್ಲೋಡ್ ಮಾಡಲಾಗಿದ್ದು, ಹೆಸರು ಮಾತ್ರ ಬೇರೆ ಬೇರೆ ಮಾಡಲಾಗಿದೆ.
ಇದೇ ರೀತಿ ಹುನಗುಂದ ಹಾಗೂ ಇಳಕಲ್ ತಾಲೂಕಿನ ರಾಮವಾಡಗಿ, ಚಿನ್ನಾಪುರ ಎಸ್ ಟಿ ಅಂಗನವಾಡಿ ಕಟ್ಟಡಕ್ಕೆ ಒಂದೇ ರೀತಿಯ ಫೋಟೋ ಅಪ್ಲೋಡ್ ಮಾಡಲಾಗಿದೆ. ಇವುಗಳನ್ನು ನೋಡಿದಾಗ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.