ಡೈಲಿ ವಾರ್ತೆ: 21/JUNE/2025

ರೈಲ್ವೆ ಹಳಿ ಮೇಲೆ ಬಿದ್ದ
ಬೃಹತ್ ಬಂಡೆ| ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ವಿಭಾಗದ ರೈಲು ಸೇವೆಯಲ್ಲಿ ವ್ಯತ್ಯಯ – ಲೋಕೋ ಪೈಲಟ್​ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ!

ಹಾಸನ: ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲ್ವೆ ಹಳಿ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಶನಿವಾರ ಮುಂಜಾನೆ ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಟ್ಟದಿಂದ ಬಂಡೆಗಳು ಜಾರಿ ಸರಕು ರೈಲುಗಳು ಬಳಸುವ ರೈಲ್ವೆ ಹಳಿಯ ಮೇಲೆ ಬಿದ್ದ ಕಾರಣ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅವರು ಹೇಳಿದರು.

ಬೆಳಗ್ಗೆ 9.10ಕ್ಕೆ ಸಂಪೂರ್ಣ ಬಂಡೆಗಳ ತೆರವು ಕಾರ್ಯಾಚರಣೆ ನಡೆದು ರೈಲುಗಳಿಗೆ ಗಂಟೆಗೆ 20 ಕಿ.ಮೀನಲ್ಲಿ ಸಂಚರಿಸಲು ನಿರ್ಬಂಧ ಹೇರಲಾಗಿದೆ. ಸಂಚಾರದಲ್ಲಿ ವ್ಯತ್ಯಯಗೊಂಡಿದ್ದ ಎಲ್ಲಾ ರೈಲುಗಳು ಮುಂದಿನ ಪ್ರಯಾಣವನ್ನು ಮುಂದುವರಿಸಿದೆ” ಎಂದು ಡಾ. ಮಂಜುನಾಥ್ ಕನಮಡಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ ಹುಬ್ಬಳ್ಳಿ ಅವರು ಮತ್ತೊಮ್ಮೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಲೋಕೋ ಪೈಲಟ್​ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ: ಕಿಲೋ ಮೀಟರ್​ 74 ಮತ್ತು 75ರ ಬಳಿ ಈ ಘಟನೆ ಸಂಭವಿಸಿದೆ. ಇದೇ ಮಾರ್ಗದಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತ ರೈಲೊಂದು ಸಂಚರಿಸುತ್ತಿತ್ತು. ಲೋಕೋ ಪೈಲಟ್​ಗೆ ಹಳಿಗಳ ಮೇಲೆ ಬಿದ್ದಿದ್ದ ಬೃಹತ್​ ಬಂಡೆಗಳು ಕಾಣಿಸಿದೆ. ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಇಲ್ಲವಾದಲ್ಲಿ ರೈಲಿನ ಇಂಜಿನ್‌ ಬಂಡೆಗೆ ಗುದ್ದಿ ಭಾರೀ ಅವಘಡ ಸಂಭವಿಸುವ ಅಪಾಯವಿತ್ತು.

ಹೀಗಾಗಿ ರೈಲಿನಲ್ಲಿಯೇ ಸಿಲುಕಿದ್ದ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಗ್ಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಸಂಚಾರದಲ್ಲಿ ವ್ಯತ್ಯಯಗೊಂಡಿದ್ದ ರೈಲುಗಳ ವಿವರ:
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಕಡಗರವಳ್ಳಿಗೆ ಬೆಳಗ್ಗೆ 3:40ಕ್ಕೆ ಆಗಮಿಸಿತ್ತು.
ರೈಲು ಸಂಖ್ಯೆ 16585 SMVT ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಸಕಲೇಶಪುರಕ್ಕೆ ಬೆಳಗ್ಗೆ 3:10ಕ್ಕೆ ಆಗಮಿಸಿತ್ತು.
ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್​ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿತ್ತು.
ಈ ಮೂರು ರೈಲುಗಳು ಬಂಡೆ ಬಿದ್ದ ಪರಿಣಾಮ ತಡವಾಗಿ ಹೊರಟಿವೆ.