



ಡೈಲಿ ವಾರ್ತೆ: 21/JUNE/2025


ಮೇಡೇ ಘೋಷಿಸಿದ ಪೈಲಟ್: ಬೆಂಗಳೂರು ಏರ್ಪೋರ್ಟ್ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ವರ್ಶ

ದೇವನಹಳ್ಳಿ: ಹಾರಾಟದಲ್ಲಿದ್ದ ವಿಮಾನದಲ್ಲಿ ಇಂಧನ ಖಾಲಿಯಾದ ಹಿನ್ನೆಲೆ ಬೆಂಗಳೂರು ಏರ್ಪೋರ್ಟ್ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ವರ್ಶ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 19ರಂದು ಘಟನೆ ನಡೆದಿದೆ. ಇಂಧನ ಖಾಲಿಯಾಗಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಇಂಡಿಗೋ ವಿಮಾನ ಗುವಾಹಟಿಯಿಂದ 180 ಪ್ರಯಾಣಿಕರನ್ನು ಹೊತ್ತು ಚೈನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗಿದ್ದನ್ನು ತಿಳಿದು MAY DAY ಎಂದು ಕೂಗಿ ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ನಂತರ ಇಂಧನ ತುಂಬಿಸಿಕೊಂಡು ವಿಮಾನ ಚೈನ್ನೈಗೆ ತೆರಳಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ.
6E-6764 ಇಂಡಿಗೋ ವಿಮಾನ ಗುರುವಾರ ಸಂಜೆ 4.40ಕ್ಕೆ ಗುವಾಹಟಿಯಿಂದ ಹೊರಟು ಸಂಜೆ 7.45ಕ್ಕೆ ಚೆನ್ನೈನಲ್ಲಿ ಇಳಿಯಬೇಕಿತ್ತು. ಆದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ 35 ನಾಟಿಕಲ್ ಮೈಲುಗಳಷ್ಟು ದೂರುದಲ್ಲಿರುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ಲ್ಯಾಂಡಿಂಗ್ ಸಂದೇಶವನ್ನು ಕಳುಹಿಸಿದ್ದಾರೆ. ನಂತರ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಾಯು ಸಂಚಾರ ನಿಯಂತ್ರಣ ವರದಿ ಮಾಡಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದೆ.
ಇದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು, ಚೆನ್ನೈನಿಂದ 68 ಪ್ರಯಾಣಿಕರನ್ನು ಮಧುರೈಗೆ ಹೊತ್ತೊಯ್ಯುತ್ತಿದ್ದ ಮತ್ತೊಂದು ಇಂಡಿಗೊ ವಿಮಾನವು ಶುಕ್ರವಾರ ತಾಂತ್ರಿಕ ದೋಷದಿಂದ ಚೆನ್ನೈಗೆ ಹಿಂತಿರುಗಿ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ತುರ್ತು ಲ್ಯಾಂಡಿಂಗ್ ಮತ್ತು ತಾಂತ್ರಿಕ ದೋಷಗಳನ್ನು ಒಳಗೊಂಡ ಸತತ ಘಟನೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆ, ವಿಮಾನ ಸಿದ್ಧತೆ ಮತ್ತು ಇಂಧನ ನಿರ್ವಹಣೆಯ ಬಗ್ಗೆ ವಾಯುಯಾನ ಸುರಕ್ಷತಾ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.