ಡೈಲಿ ವಾರ್ತೆ: 24/JUNE/2025

ಮಂಗಳೂರು| ವಿವಿಧ ಆ್ಯಪ್ ಗಳಲ್ಲಿ ಸಾಲ ಪಡೆದಿದ್ದ ಯುವಕ ಆತ್ಮಹತ್ಯೆಗೆ ಶರಣು

ಮಂಗಳೂರು: ಅರ್ಥಿಕ ಹೊರೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೋಡಿಕಲ್‌ನಲ್ಲಿ ಜೂ. 24 ರಂದು ಮಂಗಳವಾರ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಯುವಕ ಮನೆಯಲ್ಲಿ ಉಪಹಾರ ಸೇವಿಸಿ ಕೋಣೆಗೆ ಹೋಗಿದ್ದ. ಈತ ಸಂಜೆ ಮಲಗುವ ಅಭ್ಯಾಸ ಹೊಂದಿದ್ದ. ಈ ಹಿನ್ನೆಲೆ ಮನೆಯವರು ಆತನ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ.
ಸಂಜೆಯಾದರೂ ಬಾರದ ಹಿನ್ನೆಲೆ ಮನೆಯವರು ಬಾಗಿಲು ಬಡಿದರೂ, ಕರೆದರೂ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ರಾತ್ರಿ 8.15ರ ವೇಳೆಗೆ ಬಾಗಿಲಿನ ಎಡೆಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಪ್ರಾಥಮಿಕ ತನಿಖೆಯಿಂದ ಅರ್ಥಿಕ ಹೊರೆಯಿಂದ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಈತ ವಿವಿಧ ಆ್ಯಪ್ ಗಳಲ್ಲಿ ಸಾಲ ಪಡೆದಿದ್ದು, ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.