



ಡೈಲಿ ವಾರ್ತೆ: 28/JUNE/2025


ಕೋಟ ಸಹಕಾರಿ ಸಂಘ ನಿರ್ದೇಶಕ ಸ್ಥಾನ ಗೊಂದಲ:
ಮರು ಎಣಿಕೆ ಮನವಿ ಕಾನೂನು ನೀಡಿದ ಹಕ್ಕು- ಸಹಕಾರಿ ಮಿತ್ರರು ತಂಡ

ಕೋಟ: ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಮಿತ್ರರು ತಂಡದಿಂದ ಚುನಾವಣೆಗೆ ಸ್ಪಧಿಸಿದ ಪ್ರೇಮಾ ಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು.
ಚುನಾವಣೆಯಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋತಾಗ ಮರು ಎಣಿಕೆ ಕೋರುವುದು ಕಾನೂನಾತ್ಮಕ ಹಕ್ಕಾಗಿದ್ದು ನ್ಯಾಯಾಲಯ ಕೂಡ ಈ ಹಕ್ಕನ್ನು ಎತ್ತಿ ಹಿಡಿದಿದೆ ಎಂದು ಸಹಕಾರಿ ಮಿತ್ರರು ತಂಡದ ಮುಖಂಡ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ಅವರು ಜೂ. 28 ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಮಾ ಗಾಣಿಗ ಹಾಗೂ ಪ್ರೇಮಾ ಗಣೇಶ್ ನಡುವಿನ ಸ್ಪರ್ಧೆಯಲ್ಲಿ 620ಮತಗಳು ಅಸಿಂಧುವಾಗಿದ್ದವು. ಹೀಗಾಗಿ ಸಹಜವಾಗಿ ಅಸಿಂಧು ಮತಗಳನ್ನು ಕುಲಂಕುಶವಾಗಿ
ಪರಿಶೀಲಿಸಿದರೆ ಕೆಲವು ನಮ್ಮ ಪರವಾಗಿ ಇರಬಹುದು ಎನ್ನುವ ಆಸೆ ಎರಡೂ ಕಡೆಯವರಿಗೆ ಇರುತ್ತದೆ. ಅದರಂತೆ ಮರು ಎಣಿಕೆಗೆ ಅವಕಾಶ ಕೋರಲಾಗಿದೆ ಎಂದರು.

ಜೂ. 29ರಂದು ನಡೆಯುವ ಮರು ಎಣಿಕೆಯಲ್ಲಿ ಯಾವುದೇ ರೀತಿಯ ಫಲಿತಾಂಶ ಬಂದರೂ ಅದನ್ನು ಸ್ವೀಕರಿಸಲು ಸಿದ್ಧವಾಗಿದ್ದೇನೆ ಎಂದು ಪರಾಜಿತ ಅಭ್ಯರ್ಥಿ ಪ್ರೇಮಾ ಗಣೇಶ್ ತಿಳಿಸಿದರು.


ಎ.ಆರ್. ಕಚೇರಿ ಎದುರು ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ಸಹಕಾರಿ ವ್ಯವಸ್ಥೆಯನ್ನು ಸಂಪೂರ್ಣ ರಾಜಕೀಯಗೊಳಿಸಿ ಸಣ್ಣತನ ಮೆರೆದಿದ್ದಾರೆ. ಉಚ್ಛ ನ್ಯಾಯಾಲಯ ಮರುಎಣಿಕೆ ಆದೇಶವನ್ನು ಪುರಸ್ಕರಿಸಿದ ಮೇಲೂ ಪ್ರತಿಭಟನೆ ಮಾಡಿರುವುದು ಕಾನೂನಿಗೆ
ತೋರಿದ ಅಗೌರವವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಹಾಗೂ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೋಟ ಸಿಎ ಬ್ಯಾಂಕ್ ಮಾಜೀ ಅಧ್ಯಕ್ಷರಾದ ತಿಮ್ಮ ಪೂಜಾರಿ, ಉಪಾಧ್ಯಕ್ಷರಾದ ನಾಗರಾಜ್ ಹಂದೆ, ನಿರ್ದೇಶಕರಾದ T ಮಂಜುನಾಥ್, ಮಹೇಶ್ ಶೆಟ್ಟಿ, ವಸಂತಿ ಪೂಜಾರಿ,ಚಂದ್ರ ಪೂಜಾರಿ, ರಶ್ಮಿತಾ, ರವೀಂದ್ರ ಕಾಮತ್, ಶೇಖರ್ ಮರಕಲ, ದಿನಕರ್ ಶೆಟ್ಟಿ, ಅಚ್ಚುತ್ ಪೂಜಾರಿ ಉಪಸ್ಥಿತರಿದ್ದರು.